ಚಿತ್ರದುರ್ಗ: ಪತ್ನಿಯನ್ನು ಕೊಂದು, ಪತಿಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ತಾಲೂಕಿನ ಬಗ್ಗಲ ಬಗ್ಗಲರಂಗವ್ವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಗ್ಗಲರಂಗವ್ವನಹಳ್ಳಿ ನಿವಾಸಿ ಸಾಕಮ್ಮ (26) ಕೊಲೆಯಾದ ಮಹಿಳೆ. ಶ್ರೀಧರ್ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಪತಿ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಐದು ವರ್ಷಗಳ ಹಿಂದೆ ಸಾಕಮ್ಮ ಅವರನ್ನು ಪ್ರೀತಿಸಿ, ಎರಡು ಕುಟುಂಬಗಳ ವಿರೋಧದ ನಡುವೆಯೂ ಶ್ರೀಧರ್ ಮದುವೆಯಾಗಿದ್ದ. ಸಾಕಮ್ಮ ಹಾಗೂ ಶ್ರೀಧರ್ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಶ್ರೀಧರ್ ಕಳೆದ ಕೆಲವು ತಿಂಗಳುಗಳಿಂದ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದ. ಅಲ್ಲದೇ ಪ್ರತಿದಿನ ಮದ್ಯಪಾನ ಮಾಡಿ, ಮನೆಗೆ ಬಂದು ಸಾಕಮ್ಮ ಅವರ ಜೊತೆಗೆ ಜಗಳವಾಡಿ, ಹಲ್ಲೆ ನಡೆಸುತಿದ್ದನು. ಆದರೆ ಇಂದು ಬೆಳಗ್ಗೆ ಎಲ್ಲರೂ ಮಲಗಿದ್ದ ವೇಳೆ ಸಾಕಮ್ಮನ ತಲೆ ಮೇಲೆ ಕಲ್ಲನ್ನು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡ ಮಗು ತಕ್ಷಣ ಸಮೀಪದ ಅವರ ಅಜ್ಜಿಯ ಮನೆಗೆ ಹೋಗಿ ವಿಷಯ ತಿಳಿಸಿದೆ. ಪೊಲೀಸರು ತನ್ನನ್ನು ಬಂಧಿಸಿ, ಚಿತ್ರಹಿಂಸೆ ನೀಡುತ್ತಾರೆ ಎಂದು ಹೆದರಿದ ಶ್ರೀಧರ್ ಹೊಲವೊಂದರಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಆತನನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಚಿತ್ರದುರ್ಗ ನಗರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರರಣ ದಾಖಲಿಸಿಕೊಂಡಿದ್ದಾರೆ.