ಚಿಕ್ಕೋಡಿ/ಬೆಳಗಾವಿ: ರಾಜ್ಯದಲ್ಲಿ ದಲಿತ ಯುವಕನನ್ನ ಬೆತ್ತಲು ಮಾಡಿ ಥಳಿಸಿರುವ ಘಟನೆ ಮಾಸುವ ಮುನ್ನವೇ ದಲಿತ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಮೋಸ ಮಾಡಿರುವ ಘಟನೆ ಚಿಕ್ಕೋಡಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಮಕನಮರಡಿ ಗ್ರಾಮದ ಮಂಜುನಾಥ ರಜಪೂತ ಮೋಸ ಮಾಡಿದ ಯುವಕ. ಈತ ಯುವತಿಗೆ ಮದುವೆ ಆಗುವ ಭರವಸೆ ನೀಡಿ ಆರು ವರ್ಷ ಪ್ರೀತಿಸಿ ದೈಹಿಕವಾಗಿ ಅನುಭವಿಸಿ ಈಗ ಮದುವೆಯಾಗುವುದಿಲ್ಲ ಎಂದು ಹೇಳಿ ಮೋಸ ಮಾಡಿದ್ದಾನೆ.
ಆರೋಪಿ ಮಂಜುನಾಥ ಸುಮಾರು ಆರು ವರ್ಷಗಳಿಂದ ಅದೇ ಗ್ರಾಮದ ದಲಿತ ಯುವತಿಯನ್ನು ಪ್ರೀತಿಸುತ್ತಿದ್ದನು. ಬಳಿಕ ಆಕೆಗೆ ಮದುವೆಯಾಗುವುದಾಗಿ ಭರವಸೆ ನೀಡಿ ವಿವಿಧ ಕಡೆಗಳಲ್ಲಿ ಸುತ್ತಾಡಿಸಿದ್ದಾನೆ. ಅಷ್ಟೇ ಅಲ್ಲದೇ ದೈಹಿಕವಾಗಿ ಸಂಪರ್ಕವನ್ನು ಹೊಂದಿದ್ದು, ಇದೀಗ ಯುವತಿ ದಲಿತ ಆಗಿರುವ ಕಾರಣ ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ಹೇಳಿ ಕೈ ಕೊಟ್ಟಿದ್ದಾನೆ. ನಂತರ ಯುವತಿಯ ಮಂಜುನಾಥನ ಮನೆಗೆ ಹೋಗಿದ್ದಾಳೆ. ಆದರೆ ಅಲ್ಲಿ ಮನೆಯವರು ಆಕೆಯನ್ನು ಬೈಯ್ದು ವಾಪಸ್ ಕಳಿಸಿದ್ದಾರೆ.
ಇದರಿಂದ ನೊಂದ ಯುವತಿ ಯಮಕನಮರಡಿ ಪೋಲಿಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದಾಳೆ. ಮಂಜುನಾಥ, ಆತನ ತಾಯಿ ಮತ್ತು ಸಹೋದರರ ಮೇಲೆ ದೂರು ದಾಖಲಿಸಿದ್ದಳು. ಯುವತಿಯ ನೀಡಿದ ದೂರಿನ ಮೇರೆಗೆ ಪೊಲೀಸರು ಲವ್ ಸೆಕ್ಸ್ ದೋಖಾ ಮಾಡಿರುವ ಯುವಕನನ್ನ ಬಂಧಿಸಿ ಹಿಂಡಲಗಾ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ಇನ್ನೂ ಯುವಕನ ತಾಯಿ ಹಾಗೂ ಸಹೋದರರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.