– ಮನೆಯವರಿಂದ ಅತ್ಯಾಚಾರ ಆರೋಪ
ಬಾಗಲಕೋಟೆ: ಪ್ರೀತಿ ವಿಷಯವಾಗಿ ಯುವತಿ ಮತ್ತು ಯುವಕನ ನಡುವೆ ವೈಮನಸ್ಸು ಉಂಟಾಗಿ, ಯುವತಿಯ ಮೇಲೆ ಮಾರಣಾಂತಿಕ ಹಲ್ಲೆಯಾಗಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕನಾಳ ಗ್ರಾಮದಲ್ಲಿ ನಡೆದಿದೆ.
ರೇಣುಕಾ (24) ಹಲ್ಲೆಗೊಳಗಾದ ಯುವತಿ. ಪ್ರಿಯಕರ ಪ್ರವೀಣ್ ಹಲ್ಲೆ ಮಾಡಿದ್ದಾನೆ. ರೇಣುಕಾ ಹಾಗೂ ಪ್ರವೀಣ್ ಇಬ್ಬರು ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ 6 ತಿಂಗಳಿಂದ ಇಬ್ಬರ ಮಧ್ಯೆ ಬ್ರೇಕಪ್ ಆಗಿತ್ತು. ಈ ವಿಷಯವಾಗಿ ರೇಣುಕಾ ಹಾಗೂ ಪ್ರವೀಣ್ ನಡುವೆ ವೈಮನಸ್ಸು ಉಂಟಾಗಿತ್ತು. ಇಬ್ಬರ ನಡುವೆ ಸಂಬಂಧಗಳು ಹಾಳಾಗಿದ್ದು, ಇಬ್ಬರೂ ದೂರವಾಗಿದ್ದರು.
ಶನಿವಾರ ರೇಣುಕಾ ಪ್ರೀತಿಯ ವಿಷಯವಾಗಿ ಮಾತನಾಡಲು ಪ್ರಿಯಕರ ಪ್ರವೀಣ್ ಮನೆಗೆ ತೆರಳಿದ್ದಳು. ಅಲ್ಲಿ ಇಬ್ಬರ ಮಧ್ಯೆ ವಾದ-ವಿವಾದ ಉಂಟಾಗಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಹಲ್ಲೆಯಿಂದ ರೇಣುಕಾ ತಲೆ, ಕಿವಿ ಭಾಗದಲ್ಲಿ ರಕ್ತಸ್ರಾವ ಉಂಟಾಗಿ, ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಗಾಬರಿಗೊಂಡ ಪ್ರವೀಣ್ ಹಾಗೂ ಮನೆಯವರು ರಾತ್ರೋರಾತ್ರಿ ರೇಣುಕಾಳನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.
ಹಲ್ಲೆಯಿಂದ ರೇಣುಕಾ ಸ್ಥಿತಿ ಗಂಭೀರವಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ರೇಣುಕಾಳ ಮನೆಯವರಿಗೆ ಗೊತ್ತಾಗಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಆಕೆಯ ಮನೆಯವರು, ಪ್ರವೀಣ್ ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆಕೆ ಒಪ್ಪದಿದ್ದಾಗ ಹಲ್ಲೆ ಮಾಡಿದ್ದಾನೆಂದು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಗೂಡುರು ಔಟ್ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುವುದಾಗಿ ರೇಣುಕಾ ಮನೆಯವರು ಹೇಳುತ್ತಿದ್ದಾರೆ. ಆದರೆ ಹಲ್ಲೆ ಮಾಡಿರುವ ಪ್ರವೀಣ್ ಹಾಗೂ ಮನೆಯವರು ಸಂಪರ್ಕಕ್ಕೆ ಸಿಗುತ್ತಿಲ್ಲ.