ಚಿಕ್ಕೋಡಿ: ಲಾಟರಿ ಟಿಕೆಟ್ ಮಾರಿ ವಂಚನೆ ಮಾಡುತ್ತಿದ್ದ ನಾಲ್ವರನ್ನು ದೇವಸ್ಥಾನದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ನಡೆದಿದೆ.
ಆದರ್ಶ ಫೌಂಡೇಶನ್ ಗ್ರೂಪ್ ಹೆಸರಿನಲ್ಲಿ ಕಳೆದ ಎರಡು ತಿಂಗಳಿನಿಂದ ಲಾಟರಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಆದರೆ ಇಂದು ಟಿಕೆಟ್ ಡ್ರಾ ಮಾಡುವ ವೇಳೆ ಗ್ರಾಮದ ಯಾರಿಗೂ ಬಹುಮಾನ ದೊರೆತಿಲ್ಲ ಅಂತಾ ನಾಲ್ವರನ್ನು ಹಿಡಿದು ಗ್ರಾಮಸ್ಥರು ಥಳಿಸಿದ್ದಾರೆ.
ಏನಿದು ಲಾಟರಿ ಆಟ:
ಆದರ್ಶ ಫೌಂಡೇಶನ್ ಗ್ರೂಪ್ ಹೆಸರಿನಲ್ಲಿ ಕಳೆದ ಎರಡು ತಿಂಗಳಿಂದ ಲಾಟರಿ ಟಿಕೆಟ್ ಮಾರುತ್ತಿದ್ದರು. ತಾವು ಪ್ರಚಾರಕ್ಕಾಗಿ ತಂದಿದ್ದ ಪಾಂಪ್ಲೆಟ್ನಲ್ಲಿ ದುಬಾರಿ ಬೆಲೆಯ ಬೈಕ್, ಗೃಹೋಪಯೋಗಿ ವಸ್ತುಗಳನ್ನು ಟಿಕೆಟ್ ವಿಜೇತರಿಗೆ ನೀಡಲಾಗುತ್ತದೆ ಎನ್ನಲಾಗಿತ್ತು. ಹೀಗಾಗಿ ಪ್ರತಿ ಟಿಕೆಟ್ಗೆ 200 ರೂ. ಶುಲ್ಕ ನಿಗದಿ ಮಾಡಿದ್ದರು. ಕೆರೂರು ಗ್ರಾಮಸ್ಥರು ಸುಮಾರು 6 ರಿಂದ 7 ಸಾವಿರ ಟಿಕೆಟ್ ಖರೀದಿ ಮಾಡಿದ್ದರು.
ಬುಧವಾರ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಗ್ರಾಮದ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಆದರೆ ಯಾರೋಬ್ಬರಿಗೂ ಬಹುಮಾನ ಸಿಗಲಿಲ್ಲ. ಹೀಗಾಗಿ ಲಾಟರಿ ಟಿಕೆಟ್ ಮಾರಾಟಗಾರರ ಜೊತೆಗೆ ಗ್ರಾಮಸ್ಥರು ಮಾತಿಗಿಳಿದಿದ್ದು, ಬಳಿಕ ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಲಘು ಲಾಠಿ ಪ್ರಹಾರ ನಡೆಸಿದರು.
ಗ್ರಾಮಸ್ಥರಿಂದ ಸಾಮೂಹಿಕ ಹಲ್ಲೆಗೆ ಒಳಗಾದ ಲಾಟರಿ ವ್ಯಾಪಾರಿಗಳು ಗಾಯಗೊಂಡಿದ್ದು, ಅವರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅವರ ಮೂಲಗಳ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಲಾಟರಿ ವ್ಯಾಪಾರಿಗಳು ಸುತ್ತಮುತ್ತಲಿನ ಗ್ರಾಮದಲ್ಲಿಯೂ ಲಾಟರಿ ಮಾರಾಟ ಮಾಡಿದ್ದಾರೆ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.