ಕಾರವಾರ: ಬಸ್ ಚಾಲಕನ ಸಮಯಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಗಟ್ಟ ಪ್ರದೇಶದ ಇಳಿಜಾರಿನಲ್ಲಿ ನಡೆದಿದೆ.
ಲಾರಿ ಚಾಲಕ ಈರಣ್ಣ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಚಾಲಕ ಕತ್ತಿ ಕಾನಾಪುರ್ ತಮ್ಮ ಜೀವದ ಹಂಗು ತೊರೆದು ಬಸ್ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬ್ರೇಕ್ ಫೇಲ್ ಆಗಿದ್ದ ಬಸ್ಸನ್ನು ನಿರಂತರವಾಗಿ ಲಾರಿಗೆ ಡಿಕ್ಕಿ ಹೊಡೆಸಿಕೊಳ್ಳುವ ಮೂಲಕ ಬಸ್ ವೇಗ ತಗ್ಗಿಸಿ ಪ್ರಯಾಣಿಕರನ್ನು ಸಂಭವನೀಯ ಅಪಘಾತದಿಂದ ಪಾರು ಮಾಡಿದ್ದಾರೆ.
ನಡೆದಿದ್ದೇನು?:
ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೊರಟಿದ್ದ ಗದಗ ಡಿಪೋ ಗೆ ಸೇರಿದ ಕೆ.ಎ 26 ಎಫ್ 1025 ನಂಬರಿನ ಬಸ್ ಅರಬೈಲ್ ಇಳಿಜಾರಿನಲ್ಲಿ ಆಗಮಿಸುತ್ತಿದಂತೆ ಬ್ರೇಕ್ ಫೇಲ್ ಆಗಿತ್ತು. ಆದರೆ ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ಸು ಚಾಲಕನ ನಿಯಂತ್ರಣಕ್ಕೆ ಬರಲಿಲ್ಲ. ಈ ಹಂತದಲ್ಲಿ ಬಸ್ ಕಂದಕಕ್ಕೆ ಉರುಳುವ ಸಾಧ್ಯತೆ ಇತ್ತು.
ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಜೀವಭಯದಿಂದ ಆತಂಕಗೊಂಡಿದ್ದರು. ಈ ವೇಳೆ ಮುಂದೆ ಚಲಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಎರಡು ಬಾರಿ ಬಸ್ ಡಿಕ್ಕಿಯಾದ ನಂತರ ಬಸ್ಸಿನ ಬ್ರೇಕ್ ಫೇಲ್ ಆಗಿರುವುದನ್ನು ಅಂದಾಜಿಸಿದ ಗೊಬ್ಬರ ಸಾಗಿಸುತ್ತಿದ್ದ ಲಾರಿ ಚಾಲಕ ಈರಣ್ಣ, ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು ಬಸ್ಸಿನ ವೇಗ ಕಡಿಮೆ ಮಾಡಿದ್ದಾರೆ.
ಹೀಗೆ ವೇಗ ಕಡಿಮೆ ಮಾಡಿಕೊಂಡ ಬಸ್ ಸುಮಾರು 4 ಕಿಮೀ ದೂರ ಚಲಿಸಿ ಅರಬೈಲ್ ಘಟ್ಟದ ಇಳಿಜಾರು ಮುಗಿದ ನಂತರ ನಿಂತಿತು. ಬಸ್ ನಿಂತ ಕೂಡಲೇ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಲಾರಿ ಚಾಲಕ ಈರಣ್ಣ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಅಪಘಾತದ ಪರಿಣಾಮ ಲಾರಿ ಹಿಂಭಾಗ ಹಾಗೂ ಬಸ್ ಮುಂಭಾಗಕ್ಕೆ ಹಾನಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv