ರಾಯಚೂರು: ಲಾರಿ ಪಲ್ಟಿ ಹೊಡೆದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಬೂತಲದಿನ್ನಿ ಬಳಿ ನಡೆದಿದೆ.
45 ವರ್ಷದ ರಾಜಣ್ಣ ಹಾಗೂ 38 ವರ್ಷದ ಜ್ಯೋತಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ದೈವಿ ದಂಪತಿ. ಇನ್ನೋರ್ವ ದಂಪತಿ ಗೋಪಿ, ದೇವಮ್ಮಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ರವಾನಿಸಲಾಗಿದೆ.
ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಚಾಲಕನ ಬೇಜವಾಬ್ದಾರಿಯಿಂದ ವಿರುದ್ಧ ದಿಕ್ಕಿನಲ್ಲಿ ಬಂದ ಲಾರಿ ಟಿನ್ ಶಡ್ಗಳ ಮೇಲೆ ಉರುಳಿ ಬಿದ್ದಿದೆ. ಭತ್ತದ ಲೋಡ್ ತುಂಬಿದ್ದ ಲಾರಿ ಬೀಳುತ್ತಿದ್ದಂತೆ ಶಡ್ನಲ್ಲಿ ವಾಸಿಸುತ್ತಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ನಿದ್ರೆಯಲ್ಲಿದ್ದ ಕುಟುಂಬ ಚಿರನಿದ್ರೆಗೆ ಜಾರಿದೆ.
ಭತ್ತದ ಲೋಡ್ ತುಂಬಿದ ಲಾರಿ ಶಹಪುರದಿಂದ ಸಿಂಧನೂರು ಕಡೆಗೆ ಹೊರಟಿತ್ತು. ಈ ವೇಳೆ ದುರ್ಘಟನೆ ನಡೆದಿದೆ. ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಾರಿ ಚಾಲಕ ಹಾಗೂ ಕ್ಲೀನರ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.