ಬೆಂಗಳೂರು: ದೇವಾಲಯದ ಪ್ರವೇಶ ದ್ವಾರಕ್ಕೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಅಡಕಮಾರನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದಿದೆ.
ದೇವಾಲಯದ ಪ್ರವೇಶ ದ್ವಾರಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಂಬ ಕುಸಿದು, ಬೈಕ್ ಸವಾರನ ಮೇಲೆ ಬಿದ್ದಿದೆ. ಕಂಬದ ಅವಶೇಷಗಳಡಿ ಸಿಲುಕಿದ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶ ಮೂಲದ ಕೂಲಿ ಕಾರ್ಮಿಕ ನರಸಪ್ಪ ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನರಸಪ್ಪ ಕೇವಲ 3 ದಿನಗಳ ಹಿಂದೆ ಕೂಲಿ ಅರಸಿ ಕುಟುಂಬ ಸಮೇತರಾಗಿ ಆಂಧ್ರಪ್ರದೇಶದಿಂದ ಅಡಕಮಾರನಹಳ್ಳಿಗೆ ಬಂದಿದ್ದರು. ಆದರೆ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಪ್ರವೇಶ ದ್ವಾರದ ಕಂಬ ಬೈಕ್ ಮೇಲೆ ಬಿದ್ದು, ನರಸಪ್ಪ ಬಲಿಯಾಗಿದ್ದಾನೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಜನ ಸಾವನ್ನಪ್ಪಿರೋದು ತಲೆ ತಗ್ಗಿಸುವ ವಿಚಾರ: ಡಾ.ಶಿವರಾಜ್ ಪಾಟೀಲ್
ಗ್ರಾಮದ ಪಕ್ಕದ ರಾವುತ್ತನಹಳ್ಳಿ ರಸ್ತೆ ಸಂಪೂರ್ಣ ಹಾಳಾಗಿರುವ ಹಿನ್ನೆಲೆ ಲಾರಿಗಳು ಗ್ರಾಮದ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ. ಈ ಕಾರಣದಿಂದಾಗಿ ಇಂದು ನಮ್ಮ ಗ್ರಾಮದಲ್ಲಿ ದೇವಾಲಯದ ಹಾಗೂ ಗ್ರಾಮದ ಮುಖ್ಯ ಪ್ರವೇಶ ದ್ವಾರಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಾರದ ಪಿಲ್ಲರ್ ಕುಸಿದು ಬೈಕ್ ಸವಾರನ ಮೇಲೆ ಬಿದ್ದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಯುವತಿ – ಅನುಮಾನಸ್ಪದ ಸಾವು
ಯಲಹಂಕ ಶಾಸಕ ವಿಶ್ವನಾಥ್ಗೆ ತಕ್ಷಣವೇ ರಸ್ತೆ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿದ್ದು, ಮೃತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.