– ಕೂತಹಲ ಕೆರಳಿಸಿದೆ ಎಕ್ಸಿಟ್ಪೋಲ್ ಸರ್ವೆ
ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದ್ದು, ಕೇಂದ್ರ ಚುನಾವಣಾ ಆಯೋಗವು ಸಕಲ ಸಿದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಉತ್ತರ ಪ್ರದೇಶ ಮತ್ತು ಪಂಜಾಬ್ನ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9, ಬಿಹಾರ ಮತ್ತು ಮದ್ಯ ಪ್ರದೇಶದ ತಲಾ 8, ಹಿಮಾಚಲ ಪ್ರದೇಶದ ನಾಲ್ಕು, ಜಾರ್ಖಂಡ್ನ ಮೂರು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಘಡದ ಒಂದು ಕ್ಷೇತ್ರ ಸೇರಿದಂತೆ ಒಟ್ಟು 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೀತಿದೆ.
ಪ್ರಮುಖವಾಗಿ ವಾರಣಾಸಿ ಕ್ಷೇತ್ರದಿಂದ 2ನೇ ಬಾರಿಗೆ ಕಣಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 918 ಅಭ್ಯರ್ಥಿಗಳ ಭವಿಷ್ಯವನ್ನು ಒಟ್ಟು 10.01 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಬಿಹಾರದ ಪಟ್ನಾ ಸಾಹಿಬ್ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದು, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರತಿಸ್ಪರ್ಧಿಯಾಗಿದ್ದಾರೆ. ಚಿತ್ರನಟ ಸನ್ನಿ ಡಿಯೋಲ್ ಮತ್ತು ಗ್ಲಾಮರ್ ಸಂಸದೆ ಮಿಮಿ ಚಕ್ರವರ್ತಿ ಸ್ಪರ್ಧಾ ಕಣದಲ್ಲಿರುವ ತಾರಾ ಅಕರ್ಷಣೆಯಾಗಿದ್ದಾರೆ.
59 ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದ ವಾರಣಾಸಿ ಭಾರೀ ಗಮನ ಸೆಳೆಯುತ್ತಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ನಿಂದ ಅಜಯ್ ರಾಯ್ ಕಣಕ್ಕೆ ಇಳಿದಿದ್ದಾರೆ. ಕೊನೆಯ ಹಂತದ ಮತದಾನ ಆಗಿರುವುದರಿಂದ ಶುಕ್ರವಾರ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿತ್ತು. ಇದನ್ನೂ ಓದಿ: ಸದೃಢ ಸರ್ಕಾರವಿದ್ರೆ ಐಪಿಎಲ್, ಚುನಾವಣೆ, ರಂಜಾನ್, ಹನುಮಾನ್ ಜಯಂತಿ ಒಟ್ಟಿಗೆ ನಡೆಯುತ್ತೆ – ನರೇಂದ್ರ ಮೋದಿ
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮತದಾರರಿಗೆ ವಂದನೆ ತಿಳಿಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ಪ್ರಧಾನಿ ಮೋದಿ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡದೇ ಜಾರಿಕೊಂಡರು. ಈ ನಡೆಯ ಬಗ್ಗೆ ಕಾಂಗ್ರೆಸ್ ಸೇರಿದಂತೆ ಅನೇಕರು ಟೀಕಿಸಿದರು. ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಜನರಿಗೆ ಮಾಧ್ಯಮಗೋಷ್ಠಿ ನಡೆಸಿ, ಮತದಾರರಿಗೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಮೊದಲ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಿಸದ ಪ್ರಧಾನಿ: ಕಾಲೆಳೆದ ನೆಟ್ಟಿಗರು
ಎಕ್ಸಿಟ್ ಪೋಲ್ ಸರ್ವೆ:
ಸಂಜೆ 6 ಗಂಟೆಗೆ ಮತದಾನ ಮುಗಿಯುತ್ತಿದ್ದಂತೆ, ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಎಕ್ಸಿಟ್ ಪೋಲ್ ಕೂಡ ಹೊರಬೀಳಲಿದೆ. ಈಗಾಗಲೇ ರಾಜಕೀಯ ವಲಯದಲ್ಲಿ ನಾನಾ ಲೆಕ್ಕಾಚಾರಗಳೂ ನಡೆಯುತ್ತಿವೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಟೀಂ 300ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಘೋಷಿಸಿ ಬಿಟ್ಟಿದ್ದಾರೆ. ಇದನ್ನೂ ಓದಿ: ಮೊದಲ ಸುದ್ದಿಗೋಷ್ಠಿಯಲ್ಲೂ ಪ್ರಶ್ನೆ ಎದುರಿಸದ ಪ್ರಧಾನಿ – ರಾಹುಲ್ ಗಾಂಧಿ ಲೇವಡಿ
ಕಾಂಗ್ರೆಸ್ ಕೂಡ ಕಡಿಮೆ ಏನಿಲ್ಲ. ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಾವು ಪ್ರಧಾನಿ ಹುದ್ದೆಗೆ ಹಕ್ಕು ಪ್ರತಿಪಾದನೆ ಮಾಡೇ ಮಾಡ್ತೀವಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರೀಪೋಲ್ ಸರ್ವೆಗಳು ಅತಂತ್ರ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿರೋದ್ರಿಂದ ತೃತೀಯ ರಂಗ ರಚನೆಯ ಮಾತುಕತೆಗಳೂ ನಡೆಯುತ್ತಿವೆ. ದೇವೇಗೌಡರು, ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಕೆ. ಚಂದ್ರಶೇಖರರಾವ್ ಸಹಿತ ಬಹುತೇಕರು ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದಾರೆ.