ನವದೆಹಲಿ: ಲೋಕಸಭಾ ಚುನಾವಣೆ (Loksabha Election) ಹತ್ತಿರ ಬರುತ್ತಿದ್ದು, ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತವೆ. ಈ ಮಧ್ಯೆ ಲೋಕಸಭಾ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ಕೂಡ ತಯಾರಿ ನಡೆಸಲಾಗುತ್ತದೆ. ಅಂತೆಯೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumlatha Ambareesh) ಅವರು ಬೆಂಗಳೂರಿನಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಈ ಸಂಬಂಧ ಸ್ವತಃ ಸುಮಲತಾ ಅವರೇ ಸ್ಪಷ್ಟನೆ ಕೂಡ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸ್ಪರ್ಧೆ ಮಾಡುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಆಗ್ತಿರುವ ಚರ್ಚೆ ಅಷ್ಟೇ. ಆದರೆ ಈ ಬಗ್ಗೆ ನಾನೆಲ್ಲಿಯೂ ಮಾತಾಡಿಲ್ಲ, ನನ್ನ ಬಳಿ ಯಾರು ಸಹ ಕೇಳಿಲ್ಲ. ಉಹಾಪೋಹ ಎಲ್ಲಾ ಕಡೆ ಹರಿದಾಡುತ್ತಿದೆ. ಆದರೆ ನಾನು ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ ಎಂದರು.
ಮಂಡ್ಯಕ್ಕೆ ಬಿಜೆಪಿ ಸಂಸದೆ (BJP MP) ನಾನಾಗಬೇಕು: ನನ್ನ ಆಸೆ ಮಂಡ್ಯಕ್ಕೆ ಬಿಜೆಪಿ ಸಂಸದೆ ನಾನು ಆಗಬೇಕು ಅಂತ, ಇದ್ರಲ್ಲಿ ತಪ್ಪೇನಿದೆ?. 2018 ವಿಧಾನಸಭಾ ಚುನಾವಣೆಯಲ್ಲಿ ನೋಡಿದರೆ ಬಿಜೆಪಿಗೆ ಎಷ್ಟು ಶೇಕಡಾ ಮತ ಬಂದಿದೆ ಅಂತ ಗೊತ್ತಾಗುತ್ತೆ. ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಬೇರೆ ಬೇರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಶಕ್ತಿ ಹಾಗೂ ಬಿಜೆಪಿ ಇವೆಲ್ಲಾ ಬಳಸಿ ಮತ್ತೆ ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಅನ್ನೋ ಆಸೆ ನನಗಿದೆ. ಹೀಗಾಗಿ ಬಿಜೆಪಿ ಈ ಸೀಟ್ ಅನ್ನು ಉಳಿಸಿಕೊಳ್ಳುತ್ತೆ ಅನ್ನೋ ನಂಬಿಕೆ ನನಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜಕೀಯವಾಗುತ್ತೆ ಅಂತಾ ನಾನು ಕೆರಗೋಡಿಗೆ ಹೋಗಿಲ್ಲ: ಸುಮಲತಾ ಅಂಬರೀಶ್
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಮಂಡ್ಯ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದರು. ಈ ವೇಳೆ ಅವರಿಗೆ ಬಿಜೆಪಿಯು ಬಾಹ್ಯ ಬೆಂಬಲ ಘೋಷಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಸಮೀಕರಣಗಳು ಬದಲಾಗಿವೆ. ಬಿಜೆಪಿ – ಜೆಡಿಎಸ್ ಮೈತ್ರಿಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಮಂಡ್ಯ ಕ್ಷೇತ್ರಕ್ಕಾಗಿಯೇ ಪಟ್ಟು ಹಿಡಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.