ಬೆಂಗಳೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿರುವ ಸುಮಲತಾ ಮೈತ್ರಿ ಮಾತುಕತೆಗೆ ದೊಡ್ಡ ಸವಾಲಾಗಿದ್ದಾರೆ. ಆದ್ದರಿಂದ ಸುಮಲತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿ ಮಾಡಿಕೊಳ್ಳುವುದು ಎಂಬ ತೀರ್ಮಾನಕ್ಕೆ ದೋಸ್ತಿಗಳು ಬಂದಿದ್ದಾರೆ.
ಸುಮಲತಾ ಮನವೊಲಿಕೆಗೆ ಮೈಸೂರು, ಮಂಡ್ಯ, ಬೆಂಗಳೂರು ಉತ್ತರ ಎಂಬ ಸಮನ್ವಯ ಸೂತ್ರವನ್ನ ಸುಮಲತಾ ಅವರ ಮುಂದಿಡಲು ಜೆಡಿಎಸ್ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯದಿಂದ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ, ಅಂಬರೀಶ್ ಅವರ ಫೇವರೇಟ್ ಮೈಸೂರಿನಿಂದ ಸುಮಲತಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೆ, ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡುವುದು. ಆಗ ಮೂರು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದು ಎಂಬುದು ದೋಸ್ತಿಗಳು ಮೈತ್ರಿ ಸೂತ್ರವಾಗಿ ಸುಮಲತಾ ಅವರ ಮುಂದಿಡುತ್ತಿದ್ದಾರೆ.
ಆಕಸ್ಮಾತ್ ಸುಮಲತಾ ಮೈಸೂರು ಸ್ಪರ್ಧೆ ನಿರಾಕರಿಸಿದ್ರೆ ದೇವೇಗೌಡರು ಮೈಸೂರಿನಿಂದ ಸ್ಪರ್ಧಿಸಿ ಸುಮಲತಾರನ್ನ ಬೆಂಗಳೂರು ಉತ್ತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿಸಿ ಗೆಲ್ಲಿಸಿಕೊಳ್ಳುವುದು. ಸುಮಲತಾ ಅವರ ಬೆಂಗಳೂರು ಉತ್ತರ ಸ್ಪರ್ಧೆಗೆ ಒಪ್ಪಿಕೊಂಡರೆ ಜೆಡಿಎಸ್ ತನಗೆ ಬೇಕು ಎಂದು ಕೇಳಿದ್ದ ಜೆಡಿಎಸ್ ಉತ್ತರ ಕ್ಷೇತ್ರವನ್ನ ಕಾಂಗ್ರೆಸ್ ಗೆ ಬಿಟ್ಟುಕೊಡಲು ಜೆಡಿಎಸ್ ನಾಯಕರುಗಳು ಒಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ ಯಾವ ಕಾರಣಕ್ಕೂ ಮಂಡ್ಯ ಬಿಟ್ಟುಕೊಡಲ್ಲ. ಹಾಗೂ ಸುಮಲತಾ ಮಂಡ್ಯದಿಂದಲೆ ಸ್ಪರ್ಧೆ ಬಯಸಿದ್ರೆ ಜೆಡಿಎಸ್ ಅಭ್ಯರ್ಥಿಯಾಗಲು ಒಪ್ಪಿದರೆ ಅದರ ಬಗ್ಗೆಯೂ ಪರಿಶೀಲನೆ ಮಾಡುವ ಭರವಸೆಯನ್ನು ಜೆಡಿಎಸ್ ನಾಯಕರು ನೀಡಿದ್ದಾರೆ. ಹೀಗೆ ಸುಮಲತಾ ಅವರಿಗೆ ಪರ್ಯಾಯ ಕ್ಷೇತ್ರ ನೀಡುವ ಹಾಗೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಬ್ದಾರಿಯನ್ನು ವಹಿಸಿಕೊಳ್ಳುವ ಭರವಸೆ ನೀಡಿ ಸಂಧಾನ ಸೂತ್ರಕ್ಕೆ ದೋಸ್ತಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv