ಬೆಂಗಳೂರು: ಲೋಕಾಯುಕ್ತರಿಗೆ ಭದ್ರತೆ ನೀಡಲು ಆಗಿಲ್ಲ ಅಂದರೆ ರಾಜ್ಯ ಸರ್ಕಾಕ್ಕೆ ನಾಚಿಕೆಯಾಗಬೇಕು ಎಂದು ಮಾಜಿ ಉಪ ಲೋಕಾಯುಕ್ತ ನ್ಯಾ. ಚಂದ್ರಶೇಖರಯ್ಯ ಕಿಡಿಕಾರಿದ್ದಾರೆ.
ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತ ಕಚೇರಿಗೆ ವ್ಯವಸ್ಥಿತ ಭದ್ರತೆ ನೀಡಿ ಎಂದು ಹಲವು ಬಾರಿ ಪತ್ರ ಬರೆಯಲಾಗಿತ್ತು. ಅಲ್ಲದೇ ಮೆಟಲ್ ಡಿಟೆಕ್ಟರ್ ಹಾಕಿ ಎಂದು ಇಪ್ಪತ್ತು ಬಾರಿ ಪತ್ರ ಬರೆಯಲಾಗಿತ್ತು. ಆದರೆ ಸರ್ಕಾರ ಯಾವುದೇ ಕ್ರಮಕೈಗೊಮಡಿಲ್ಲ. ಇದು ಅತ್ಯಂತ ಕೆಟ್ಟ ಸರ್ಕಾರ. ಈ ಸರ್ಕಾರ ಮೊದಲು ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಾಯುಕ್ತ ಕಚೇರಿಗೆ ಸರಿಯಾದ ವ್ಯವಸ್ಥೆ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಉತ್ತರ ಪ್ರದೇಶದಲ್ಲೂ ಇಂತಹ ವ್ಯವಸ್ಥೆ ಇಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಲೋಕಾಯುಕ್ತ ಮುಚ್ಚುವುದೇ ಇವರ ಮುಖ್ಯ ಉದ್ದೇಶವಾಗಿದ್ದು. ಸೂಕ್ತ ಭದ್ರತೆ ನೀಡದೆ ಇದ್ದರೆ ಇಂತಹ ಸಂಸ್ಥೆಯನ್ನು ಮುಚ್ಚುವುದು ಒಳ್ಳೆಯದು ಎಂದು ಕಿಡಿಕಾರಿದರು.