ನವದೆಹಲಿ: ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆಗೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರ ಸಿಕ್ಕಿದೆ.
ಅಪರಾಧ ಕೃತ್ಯಗಳಲ್ಲಿ ಬಂಧಿತರಾದವರ ದೈಹಿಕ ಮತ್ತು ಜೈವಿಕ ಮಾದರಿ ಸಂಗ್ರಹಿಸಲು ಪೊಲೀಸರಿಗೆ ಶಾಸನಬದ್ಧ ಅಧಿಕಾರ ನೀಡುವ ಮಸೂದೆ ಇದಾಗಿದೆ. ಇದನ್ನೂ ಓದಿ: ಪಕ್ಷವು ಎಲ್ಲಾ ಹಂತಗಳಲ್ಲೂ ಏಕತೆ ಸಾಧಿಸಲಿ: ಸೋನಿಯಾ ಗಾಂಧಿ
ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ವಿಜ್ಞಾನ, ನ್ಯಾಯಾಲಯಗಳಲ್ಲಿ ಅಪರಾಧ ಸಾಬೀತುಪಡಿಸುವಿಕೆ, ಕಾನೂನು ಜಾರಿ ಸಂಸ್ಥೆಗಳನ್ನು ಬಲಪಡಿಸುವುದು ಸೇರಿದಂತೆ ವಿವಿಧ ಆಯಾಮಗಳಿಂದ ಗಮನಿಸಿದಾಗ ಹಾಲಿ ಇರುವ ‘ಕೈದಿಗಳ ಗುರುತು ಪತ್ತೆ ಕಾಯ್ದೆ 1920’ ಅಪ್ರಸ್ತುತವಾಗಲಿದೆ. ಈಗಿನ ಸವಾಲುಗಳನ್ನು ಎದುರಿಸುವ ಜೊತೆಗೆ ವ್ಯವಸ್ಥೆ ಬಲಪಡಿಸಲು ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ ಸಹಕಾರಿಯಾಗಿದೆ ಎಂದು ಅಮಿತ್ ಶಾ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಉಗ್ರರ ದಾಳಿ- ಕಾಶ್ಮೀರಿ ಪಂಡಿತನಿಗೆ ಗುಂಡೇಟು
ಮಸೂದೆಯ ಕರಡು ಸಿದ್ಧಪಡಿಸುವಾಗ ಮಾನವ ಮತ್ತು ವೈಯಕ್ತಿಕ ಹಕ್ಕುಗಳ ಮೇಲೆ ಕಾಳಜಿ ವಹಿಸಲಾಗಿದೆ. ಕೈದಿಗಳ ಪುನರ್ವಸತಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು, ಜೈಲು ಅಧಿಕಾರಿಗಳ ಹಕ್ಕುಗಳನ್ನು ಸೀಮಿತಗೊಳಿಸುವುದು, ಶಿಸ್ತು ಕಾಪಾಡುವುದು, ಜೈಲುಗಳ ಭದ್ರತೆ, ಮಹಿಳೆಯರಿಗೆ ಪ್ರತ್ಯೇಕ ಜೈಲುಗಳು ಮತ್ತು ತೆರೆದ ಜೈಲುಗಳಂತಹ ವಿಷಯಗಳಿಗೆ ಸಂಬಂಧಿಸಿದ ವಿವಿಧ ನಿಬಂಧನೆಗಳನ್ನು ಮಸೂದೆ ಒಳಗೊಂಡಿದೆ.
ಈ ಮಸೂದೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದು ಕಾನೂನು ಬಾಹಿರ, ಅಸಾಂವಿಧಾನಿಕ ಕ್ರಮ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿವೆ. ಇದನ್ನೂ ಓದಿ: ಶ್ರೀನಗರದಲ್ಲಿ ಉಗ್ರರ ದಾಳಿ: ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮ
ಪ್ರಸ್ತುತ ಅಪರಾಧ ಪ್ರಕರಣಗಳು ನಡೆದಾಗ ಆರೋಪಿಗಳು ಸುಳಿವು ಬಿಟ್ಟು ಕೊಡದಂತೆ ಕೃತ್ಯ ಎಸಗುತ್ತಿದ್ದಾರೆ. ಒಂದೇ ರೀತಿಯ ಪ್ರಕರಣಗಳು ನಡೆದರೂ ಆರೋಪಿಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದಾರೆ. ಹೀಗಾಗಿ ಕೈದಿಗಳ ಗುರುತು ಪತ್ತೆ ಕಾಯ್ದೆಯನ್ನು ಆಧುನಿಕ ಕಾಲಕ್ಕೆ ಬದಲಾಯಿಸಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಈ ಕಾರಣಕ್ಕೆ ಸರ್ಕಾರ ಈಗ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಈ ಮಸೂದೆಯನ್ನು ಮಂಡಿಸಿತ್ತು.