ಕಲಬುರಗಿ: ಮಂಡ್ಯ ಜಿಲ್ಲೆಯಂತೆ ಕಲಬರಗಿಯಲ್ಲೂ ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳು ಲೋಕಸಬಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಉಮೇಶ್ ಜಾಧವ್ ಮತ್ತು ಶಂಕರ್ ಜಾಧವ್ ಇಬ್ಬರು ಸ್ಪರ್ಧೆ ಮಾಡುತ್ತಿದ್ದು, ಈ ಮೂಲಕ ಲೋಕಸಭಾ ರಣಕಣದಲ್ಲಿ ಹೆಸರಿನ ಕಮಾಲ್ ಜೋರಾಗಿ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಸ್ಪರ್ಧೆ ಮಾಡಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಶಂಕರ್ ಜಾಧವ್ ಅಖಾಡಕ್ಕಿಳಿಯುತ್ತಿದ್ದಾರೆ.
ಶುಕ್ರವಾರ ಶಂಕರ್ ಜಾಧವ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 3 ರಂದು ಉಮೇಶ್ ಜಾಧವ್ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ ಎಪ್ರಿಲ್ 4 ರಂದು ಕೈ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕೂಡ ನಾಮಿನೇಷನ್ ಮಾಡಲಿದ್ದಾರೆ. ಉಮೇಶ್ ಜಾಧವ್ ಅವರು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿ ಬಿಜೆಪಿ ಪಕ್ಷಕ್ಕೆ ಸೇರಿದ್ದು, 11 ಬಾರಿ ಗೆಲುವು ಕಂಡಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆತಟ್ಟಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್, ಬಿಜೆಪಿ ಬೆಂಬಲದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅಚ್ಚರಿ ಎಂಬಂತೆ ಮಂಡ್ಯದಲ್ಲಿ ಸುಮಲತಾ ಹೆಸರಿನ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಈಗ ಅದೇ ರೀತಿ ಕಲಬುರಗಿಯಲ್ಲಿ ಜಾಧವ್ ಹೆಸರಿನ ಇಬ್ಬರು ಲೋಕಸಭಾ ಚುನಾವಣೆ ಕಣಕ್ಕಿಳಿದಿದ್ದಾರೆ.