– ಮೋದಿ ನೈತಿಕ ಮತ್ತು ರಾಜಕೀಯ ಸೋಲು
– ಚುನಾವಣೆಯು ಜನರ ಗೆಲುವು.. ಪ್ರಜಾಪ್ರಭುತ್ವದ ಜಯ
ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವಿರುದ್ಧದ ಸ್ಪಷ್ಟ ಜನಾದೇಶವಾಗಿದೆ. ಇದು ಅವರ ‘ನೈತಿಕ ಮತ್ತು ರಾಜಕೀಯ ಸೋಲು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಭಿಪ್ರಾಯಪಟ್ಟಿದ್ದಾರೆ.
ಫಲಿತಾಂಶ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಚುನಾವಣಾ ಫಲಿತಾಂಶಗಳು ‘ಜಂತಾ ಕಾ ಫಲಿತಾಂಶ’. ಈ ಜನಾದೇಶ ಮೋದಿ ಜಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಇದನ್ನೂ ಓದಿ: ಆಡಳಿತಾರೂಢ ವೈಎಸ್ಆರ್ಸಿಪಿ ಧೂಳಿಪಟ – ಟಿಡಿಪಿ ತೆಕ್ಕೆಗೆ ಆಂಧ್ರ
ಇಂಡಿಯಾ ಬಣವು ಸರ್ಕಾರ ರಚಿಸುವ ಸಾಧ್ಯತೆಯ ಪ್ರಶ್ನೆಗೆ ರಾಹುಲ್ ಗಾಂಧಿ ಮಾತನಾಡಿ, ನಾವು ನಮ್ಮ ಮೈತ್ರಿ ಪಾಲುದಾರರೊಂದಿಗೆ ನಾಳೆ ಸಭೆ ನಡೆಸುತ್ತೇವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗುವುದು. ನಮ್ಮ ಮೈತ್ರಿ ಪಾಲುದಾರರನ್ನು ಕೇಳದೆ ನಾವು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು, ಫಲಿತಾಂಶದ ಬಗ್ಗೆ ಖರ್ಗೆ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದರು. ನಾವು 18 ನೇ ಲೋಕಸಭೆ ಚುನಾವಣೆಯ ಜನಾದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ. ಇದು ಜನರ ಗೆಲುವು. ಇದು ಪ್ರಜಾಪ್ರಭುತ್ವದ ಗೆಲುವು. ಈ ಬಾರಿ ಜನ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿಲ್ಲ. ಅದರಲ್ಲೂ ಆಡಳಿತ ಪಕ್ಷ ಬಿಜೆಪಿಯು ಒಬ್ಬ ವ್ಯಕ್ತಿ – ಒಂದು ಮುಖ ಎಂಬ ಹೆಸರಿನಲ್ಲಿ ಮತ ಕೇಳಿತ್ತು. ಈಗ, ಈ ಜನಾದೇಶ ಮೋದಿಜಿ ವಿರುದ್ಧ ಎಂಬುದು ಸ್ಪಷ್ಟವಾಗಿದೆ. ಇದು ಅವರ ರಾಜಕೀಯ ಮತ್ತು ನೈತಿಕ ಸೋಲು ಬರೆದುಕೊಂಡಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ಡಬಲ್ ಧಮಾಕ – ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿದ ರಾಯ್ ಬರೇಲಿ
ಕಾಂಗ್ರೆಸ್ ಪಕ್ಷದ ಪ್ರಚಾರ ಆರಂಭದಿಂದ ಕೊನೆಯ ವರೆಗೂ ಸಕಾರಾತ್ಮಕವಾಗಿತ್ತು. ನಾವು ಹಣದುಬ್ಬರ, ನಿರುದ್ಯೋಗ, ರೈತರು ಮತ್ತು ಕಾರ್ಮಿಕರ ಅವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗದಂತಹ ಸಮಸ್ಯೆಗಳನ್ನು ಕೇಂದ್ರ ವಿಷಯಗಳಾಗಿ ತೆಗೆದುಕೊಂಡಿದ್ದೆವು. ಈ ವಿಷಯಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ನಮ್ಮೊಂದಿಗೆ ಸೇರಿಕೊಂಡರು. ನಮಗೆ ಬೆಂಬಲ ನೀಡಿದರು. ಪ್ರಧಾನಿಯವರು ನಡೆಸಿದ ಅಭಿಯಾನವು ಇತಿಹಾಸದಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಮೋದಿಯವರು ಹರಡಿದ ಸುಳ್ಳುಗಳನ್ನು ಸಾರ್ವಜನಿಕರು ಅರ್ಥಮಾಡಿಕೊಂಡಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆ ಎರಡರಲ್ಲೂ ಲಕ್ಷಗಟ್ಟಲೆ ಜನರು ಭಾಗವಹಿಸಿದ್ದರು. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾರ್ಗ ಕಂಡುಕೊಳ್ಳುವುದು ಕಾಂಗ್ರೆಸ್ನ ಪ್ರಚಾರದ ಪ್ರಮುಖ ಉದ್ದೇಶವಾಗಿತ್ತು. ನಾವು ಇದನ್ನು 5 ನ್ಯಾಯ ಮತ್ತು 25 ಗ್ಯಾರಂಟಿ ಎಂದು ಹೆಸರಿಸಿದ್ದೇವೆ. ಈ ಆಧಾರದ ಮೇಲೆ ನಾವು ಗ್ಯಾರಂಟಿ ಕಾರ್ಡ್ ಮಾಡಿದ್ದೇವೆ. ಅದರೊಂದಿಗೆ ನಮ್ಮ ಕಾರ್ಯಕರ್ತರು ಮನೆ ಮನೆಗೆ ಪ್ರಚಾರ ಮಾಡಿದರು ಎಂದು ಖರ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ನಾಗಾಲ್ಯಾಂಡ್ನಲ್ಲಿ 20 ವರ್ಷಗಳ ಬಳಿಕ ಗೆಲುವು ಸಾಧಿಸಿ ಇತಿಹಾಸ ಬರೆದ ಕಾಂಗ್ರೆಸ್