ನವದೆಹಲಿ: ಲೋಕಸಭಾ ಚುನಾವಣೆಗೆ (Loksabha Elections2024) ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕರ್ನಾಟಕ ಸೇರಿದಂತೆ 13 ರಾಜ್ಯಗಳ 95 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಮತದಾನ ಕೇಸರಿ ಪಡೆಗೆ ಅತಿ ಮುಖ್ಯವಾಗಿದ್ದು, ಚಾರ್ ಸೌ ಫಾರ್ ಗುರಿ ಹೊಂದಿರುವ ಬಿಜೆಪಿ ನಾಯಕರಿಗೆ ಇದು ನಿರ್ಣಾಯಕ ಹಂತವಾಗಿದೆ.
ಮತ್ತೊಮ್ಮೆ ಮೋದಿ (Narendra Modi) ಸರ್ಕಾರ, ಚಾರ್ ಸೌ ಫಾರ್ ಎಂಬ ಘೋಷಣೆಯೊಂದಿಗೆ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿ (BJP) ನಾಯಕರು ನಿರಂತರ ಪ್ರಚಾರ ಮಾಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ ಎರಡು ಹಂತದ ಮತದಾನ ಮುಕ್ತಾಯಗೊಂಡಿದ್ದು, ಮೂರನೇ ಹಂತದ ಮೇಲೆ ಬಿಜೆಪಿ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಇದನ್ನೂ ಓದಿ: ಕಾಂಗ್ರೆಸ್ ಬ್ರದರ್ಸ್ಗಳಿಂದ ಹಿಂದೂ ಹೆಣ್ಣುಮಕ್ಕಳ ಮೇಲೆ ಮತ್ತೊಂದು ಅತ್ಯಾಚಾರ: ಹುಬ್ಬಳ್ಳಿ ಕೇಸ್ ಉಲ್ಲೇಖಿಸಿ ಬಿಜೆಪಿ ಆಕ್ರೋಶ
ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ 13 ರಾಜ್ಯಗಳ 95 ಕ್ಷೇತ್ರಗಳಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಈ ಮತದಾನ ಮೇಲೆ ಬಿಜೆಪಿ ಹೆಚ್ಚು ಕೇಂದ್ರಿಕರಿಸಿದೆ. ಈ 95 ಸ್ಥಾನಗಳಲ್ಲಿ 2009 ರಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿತ್ತು. 2014 ರಲ್ಲಿ ಇದು 67ಕ್ಕೆ ಏರಿತು. 2019 ರಲ್ಲಿ 72ಕ್ಕೆ ತಲುಪಿದೆ. ಇಷ್ಟು ಮಾತ್ರವಲ್ಲದೇ ಇಲ್ಲಿ ಪಕ್ಷದ ಮತಗಳ ಪಾಲು ಸಹ ನಿರಂತರವಾಗಿ ಏರಿಕೆಯಾಗುತ್ತಿದೆ. 78 ಸ್ಥಾನಗಳಲ್ಲಿ ಬಿಜೆಪಿ 40% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ 2009 ರಲ್ಲಿ 27 ಸ್ಥಾನಗಳಿಂದ 2014 ರಲ್ಲಿ 9 ಮತ್ತು 2019 ರಲ್ಲಿ ಕೇವಲ ನಾಲ್ಕು ಸ್ಥಾನಗಳಿಗೆ ಕುಸಿತ ಕಂಡಿತ್ತು.
ಮೂರನೇ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕ ಮತ್ತು ಗುಜರಾತ್ ನಿರ್ಣಾಯಕವಾಗಿದೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಕ್ಷೇತ್ರ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಬಿಜೆಪಿ ನಾಯಕರ ಲೆಕ್ಕಚಾರದ ಪ್ರಕಾರ 95 ಕೇತ್ರಗಳ ಪೈಕಿ 42 ಕ್ಷೇತ್ರಗಳಲ್ಲಿ ಅತ್ಯಂತ ಬಲಿಷ್ಠವಾಗಿದೆ. ಹೀಗಾಗಿ ಬಾಕಿ ಕ್ಷೇತ್ರಗಳ ಬಗ್ಗೆ ತಲೆ ಕೆಡಿಸಿಕೊಂಡಿರುವ ಬಿಜೆಪಿ ನಿರ್ಣಾಯಕ ಹೋರಾಟ ಮಾಡುತ್ತಿದೆ. ಹೆಚ್ಚುವರಿ ಸೀಟಿನ ನಿರೀಕ್ಷೆಗಳಿದ್ದರೂ ಕರ್ನಾಟಕ ಮತ್ತು ಮಹರಾಷ್ಟ್ರದಂತಹ ರಾಜ್ಯಗಳಲ್ಲಿ ಕಳೆದ ಬಾರಿ ಗೆದ್ದ ಕೆಲವು ಕ್ಷೇತ್ರಗಳನ್ನು ಈ ಬಾರಿ ಗೆಲ್ಲುವುದು ಸವಾಲಾಗಿದೆ. ಇದರಿಂದ ಹೆಚ್ಚಿನ ಸಾಧನೆಯಾಗದಿದ್ದರೂ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಲೆಕ್ಕಚಾರದಲ್ಲಿ ಬಿಜೆಪಿ ಇದೆ. ಈ ಹಂತದಲ್ಲಿ ಸಣ್ಣ ವ್ಯತ್ಯಾಸವಾದರೂ ಬಿಜೆಪಿಯ 400 ಗುರಿಗೆ ದೊಡ್ಡ ಹಿನ್ನಡೆಯಾಗಲಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಮನೆ ದೇವರು ಈಶ್ವರನ ಪ್ರಸಾದ ತಂದ ಅರ್ಚಕ