ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯ ಚುನಾವಣೆಯಲ್ಲಿ ‘ಕಹಳೆ’ ಊದಲಿದ್ದಾರೆ. ಚುನಾವಣಾ ಆಯೋಗ ಸುಮಲತಾ ಅವರಿಗೆ ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ನೀಡಿದೆ.
ಕಬ್ಬಿನ ಗದ್ದೆ ಮುಂದೆ ರೈತ, ತೆಂಗಿನ ತೋಟ, ಕಹಳೆ ಊದುತ್ತಿರುವ ರೈತನ ಚಿಹ್ನೆಗಳನ್ನು ಸುಮಲತಾ ಅವರು ಆಯ್ಕೆ ಮಾಡಿಕೊಂಡಿದ್ದರು. ಈಗ ಆಯೋಗ ಸುಮಲತಾ ಅವರು ಕೇಳಿದ್ದ ಕಹಳೆ ಊದುತ್ತಿರುವ ರೈತನ ಚಿತ್ರವನ್ನು ನೀಡಿದೆ.
ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನ 4 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸುಮಲತಾ ಅಂಬರೀಶ್, ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ, ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಗ್ರಾಮದ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.
ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡಲು ಸುಮಲತಾ ಎಂಬ ಹೆಸರಿನ ಮಹಿಳೆಯರನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಮಂಡ್ಯದಲ್ಲಿ ಕೇಳಿಬರತೊಡಗಿವೆ. ಇದರಿಂದ ಸುಮಲತಾ ಅಂಬರೀಶ್ ಅವರಿಗೆ ಬೀಳುವ ಮತಗಳನ್ನು ವಿಭಜನೆಯಾಗಿ, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಈ ತಂತ್ರ ಮಾಡಲಾಗಿದೆ ಎನ್ನಲಾಗುತ್ತಿದೆ.