ಹಾಸನ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವುದಾಗಿ ಶಪಥ ಮಾಡುವ ಮೂಲಕ ಮಾಜಿ ಸಚಿವ ಎ.ಮಂಜು ಎಡವಟ್ಟು ಮಾಡಿಕೊಂಡಿದ್ದಾರೆ.
ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾತನಾಡಿದ ಮಾಜಿ ಸಚಿವರು, 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲಾದ್ಯಂತ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದರು. ತಕ್ಷಣವೇ ವೇದಿಕೆ ಮೇಲಿದ್ದ ಸ್ಥಳೀಯ ಮುಖಂಡರು ಹಾಗೂ ಕೆಲ ಕಾರ್ಯಕರ್ತರು ಕಾಂಗ್ರೆಸ್ ಅಲ್ಲ, ಬಿಜೆಪಿ ಬಿಜೆಪಿ ಎಂದು ತಿಳಿಸಿದರು.
ಎ.ಮಂಜು ಅವರು ಭಾಷಣವನ್ನು ಮುಂದುವರಿಸಿ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧವಾಗಿವೆ. ಆದರೆ ಕಾಂಗ್ರೆಸ್ ಪ್ರಮುಖ ಕ್ಷೇತ್ರಗಳನ್ನೇ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಬೇಲೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಬಣಗಳಲ್ಲಿ ಭಿನ್ನಮತ ಕಾಣಿಸಿಕೊಂಡಿತ್ತು. ಪರಿಣಾಮ ಎರಡೂ ಬಣಗಳ ಕಾರ್ಯಕರ್ತರು ಪರಸ್ಪರ ಜಗಳ ಮಾಡಿಕೊಂಡಿದ್ದರು. ಈ ವೇಳೆ ಸಭೆಗೆ ಆಗಮಿಸಿದ ಮಾಜಿ ಸಚಿವ ಹಾಗೂ ಸ್ಥಳೀಯ ಕೆಲ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಭಿನ್ನಮತ ಏಕೆ?:
ಸಭೆಯ ಫ್ಲೆಕ್ಸ್ ನಲ್ಲಿ ಕಳೆದ ವಿಧಾನಸಭಾ ಪರಾಜಿತ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಅವರ ಭಾವಚಿತ್ರ ಹಾಕಿರಲಿಲ್ಲ. ಆದರೆ ತಾಲೂಕಿನ ಬಿಜೆಪಿ ನಾಯಕ ಕೊರಟಗೆರೆ ಪ್ರಕಾಶ್ ಅವರ ಫೋಟೋ ಮಾತ್ರ ಹಾಕಲಾಗಿತ್ತು. ಇದರಿಂದಾಗಿ ಕೋಪಗೊಂಡ ಸುರೇಶ್ ಅವರ ಬೆಂಬಲಿಗರು ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಸಭೆಗೆ ಆಗಮಿಸಿದ ಎ.ಮಂಜು ಅವರು ಎರಡೂ ಗುಂಪುಗಳ ಕಾರ್ಯಕರ್ತರಿಗೆ ಸಮಾಧಾನ ಹೇಳಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.