ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ಈ ಬಾರಿ ಲೋಕಸಭಾ ಚುನಾವಣೆಗೆ ಭರ್ಜರಿ ಪ್ರತಿಕ್ರಿಯೆ ನೀಡುವ ಸೂಚನೆ ಕಂಡುಬಂದಿದೆ.
ಸಾಧಾರಣವಾಗಿ ಬೆಂಗಳೂರಿನ ಜನತೆ ಮತದಾನದ ದಿನ ಪ್ರವಾಸ ಹೋಗುತ್ತಾರೆ ಎನ್ನುವ ಆರೋಪವಿದೆ. ಆದರೆ ಈ ಬಾರಿ ನಗರದ ಹಲವು ಕಡೆ 7 ಗಂಟೆಗೂ ಮೊದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.
ಗಿರಿನಗರದ ವಿಜಯಭಾರತಿ ಶಾಲೆಯಲ್ಲಿ ಮೊದಲು ಮತದಾನ ಮಾಡಿದವರಿಗೆ ಕನ್ನಡ ಸಂಘಟನೆ ಕಾರ್ಯಕರ್ತರು ಲಡ್ಡು ಹಂಚಿ ಪ್ರೋತ್ಸಾಹಿಸಿದ್ದಾರೆ. ಸದಾಶಿವನಗರ ಪೂರ್ಣಪ್ರಜ್ಞಾ ಶಾಲೆಯಲ್ಲಿ ಆರಂಭದಲ್ಲೇ ವೃದ್ಧ ಮತದಾರರ ಪ್ರಭುಗಳು ಆಗಮಿಸಿ ಮತದಾನ ಮಾಡಿದ್ದಾರೆ. ಮತಗಟ್ಟೆ ಸಿಬ್ಬಂದಿ ವೀಲಿಂಗ್ ಚೇರ್ ವ್ಯವಸ್ಥೆ ಮೂಲಕ ಮತದಾನ ಮಾಡಲು ಅವಕಾಶ ಕೊಟ್ಟಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಗಿರಿನಗರದ ವಿಜಯಭಾರತಿ ಶಾಲೆಯಲ್ಲಿ ಬೆಳಗ್ಗೆ ಮತವನ್ನು ಚಲಾಯಿಸಿದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡ ಅವರು ಕುಟುಂಬ ಸದಸ್ಯರೊಂದಿಗೆ ಹೆಬ್ಬಾಳದ ಭೂಪಸಂದ್ರದಲ್ಲಿ ಮತದಾನ ಮಾಡಿದರು. ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಮತದಾನ ಮಾಡಿದರು.
ಮಳೆ ಬರೋ ಮೊದಲು ವೋಟ್ ಹಾಕಿ:
ಬೆಂಗಳೂರು, ಮಂಡ್ಯ ತುಮಕೂರು ಸೇರಿದಂತೆ ಅನೇಕ ಭಾಗದಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡು ದಕ್ಷಿಣ ಒಳನಾಡಿನಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಹೀಗಾಗಿ ಮಳೆ ಬರುವ ಮೊದಲು ಮತ ಹಾಕಿದರೆ ಉತ್ತಮ.