ಚಾಮರಾಜನಗರ: ರಾಷ್ಟ್ರೀಯ ಸೇವಾ ಪ್ರಾಧಿಕಾರ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಲೋಕ್ ಅದಾಲತ್ ನಡೆದಿದ್ದು, ಜಿಲ್ಲೆಯ ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೆಗಾಲದಲ್ಲಿ ಒಟ್ಟು 14 ಬೈಠಕ್ಗಳಲ್ಲಿ ಸಂಧಾನ ಕಾರ್ಯ ನಡೆದಿದೆ.
ಜಿಲ್ಲೆಯ ನ್ಯಾಯಾಲಯಗಳಲ್ಲಿದ್ದ ಒಟ್ಟು 8,568 ಮೂಕದ್ದಮೆಗಳ ಪೈಕಿ ನಾನ್ ಕಾಂಪೌಂಡಬಲ್ 4,413 ಮೊಕದ್ದಮೆಗಳಾಗಿದ್ದವು. 4,155 ಬಾಕಿಯಿರುವ ಮೊಕದ್ದಮೆಗಳಲ್ಲಿ 1,964 ಮೊಕದ್ದಮೆಗಳನ್ನು ಲೋಕ್ ಅದಾಲತ್ಗೆ ಒಳಪಟ್ಟಂತೆ ತೆಗೆಯಲಾಯಿತು. ಶನಿವಾರ ಲೋಕ್ ಅದಾಲತ್ ಮೂಲಕ 401 ಮೊಕದ್ದಮೆಗಳಲ್ಲಿ ಉಭಯ ಪಕ್ಷದವರ ಮನವೊಲಿಸಿ ನ್ಯಾಯಾಧೀಶರ ಸಮಕ್ಷಮದಲ್ಲಿ ಇತ್ಯರ್ಥ ಪಡಿಸಿದರು.
ಚಾಮರಾಜನಗರ ತಾಲೂಕಿನ ನ್ಯಾಯಾಲಯದಲ್ಲಿ 179, ಯಳಂದೂರು ತಾಲೂಕಿನ ನ್ಯಾಯಾಲಯದಲ್ಲಿ 62, ಗುಂಡ್ಲುಪೇಟೆ ತಾಲೂಕಿನ ನ್ಯಾಯಾಲಯದಲ್ಲಿ 77, ಕೊಳ್ಳಗಾಲ ತಾಲೂಕಿನ ನ್ಯಾಯಾಲಯದಲ್ಲಿ 83 ಮೊಕದ್ದಮೆಗಳನ್ನು ಇತ್ಯರ್ಥ ಪಡಿಸಲಾಯಿತು ಹಾಗೂ ವ್ಯಾಜ್ಯ ಪೂರ್ವದ 99 ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು.
ಅಸಲುದಾವೆ ಸಂಖ್ಯೆ(ಓ.ಎಸ್) 217/1993 ಆಸ್ತಿ ವಿಭಾಗಕ್ಕಾಗಿ ಹೂಡಿರುವ ಇರ್ಸವಾಡಿ ಗ್ರಾಮದ ದಾವೆಯನ್ನು ನ್ಯಾಯಾಲಯದಲ್ಲಿ 2011ರಂದು ಎಫ್ ಗಡಿ ಪಿ ಯಾಗಿ ಪರಿವರ್ತಿಸಿ, ಈಗ ಲೋಕ್ ಅದಾಲತ್ನಲ್ಲಿ 26 ವರ್ಷಗಳ ಬಳಿಕ ಉಭಯ ಪಕ್ಷದವರಿಗೆ ರಾಜಿಯ ಮೂಲಕ ಸಂಧಾನ ಮಾಡಲಾಯಿತು.
ಹಾಗೆಯೇ ಇನ್ನೊಂದು ಅಸಲು ದಾವೆ ಸಂಖ್ಯೆ 157/2009, ಮಲ್ಕಯನ ಪುರ ಗ್ರಾಮದ ದಾವೆಯನ್ನು ಕೂಡ 10 ವರ್ಷ ಬಳಿಕ ಉಭಯ ಪಕ್ಷಗಳ ರಾಜಿಯ ಮೂಲಕ ಇತ್ಯರ್ಥ ಪಡಿಸಲಾಯಿತು ಎಂದು ನ್ಯಾಯಾಂಗ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.
ಸತ್ರ ನ್ಯಾಯಾಧೀಶರಾದ ಡಿ.ವಿ ಪಾಟಿಲ್, ಅಪರ ಸತ್ರ ನ್ಯಾಯಾಧೀಶರಾದ ಡಿ. ವಿನಯ್, ಸಿ.ಜೆ.ಎಮ್ ನ್ಯಾಯಾಧೀಶರಾದ ಎಂ. ರಮೇಶ್, ಎ.ಸಿ.ಜೆ ಹಿರಿಯ ಶ್ರೇಣಿ ನ್ಯಾಯಾಧೀಶರು, ಬಾದಾಮಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ್ ರೋಷನ್ ಶಾಹ್, ಎಸಿಜೆ ನ್ಯಾಯಾಧೀಶರಾದ ವಿ. ಸ್ಮೀತಾ, ಸದಸ್ಯ ಕಾರ್ಯದರ್ಶಿ ಸಿ.ವಿ ವಿಶಾಲಾಕ್ಷಿ ಲೊಕ್ ಅದಾಲತ್ ಕಾರ್ಯದಲ್ಲಿ ಹಾಜರಿದ್ದರು.