ರೈಲನ್ನು 1 ಕಿ.ಮೀ ರಿವರ್ಸ್ ಚಾಲನೆ ಮಾಡಿ ಇಬ್ಬರ ಪ್ರಾಣ ಉಳಿಸಿದ ಲೋಕೋಪೈಲಟ್

Public TV
1 Min Read
Indian Railway Train

ಜೈಪುರ್: ರೈಲಿನಿಂದ ಬಿದ್ದು ಗಾಯಗೊಂಡಿದ್ದ ಪ್ರಯಾಣಿಕನನ್ನು ರಕ್ಷಿಸಲು ಲೋಕೋಪೈಲಟ್ ಒಬ್ಬರು ರೈಲನ್ನು ಸುಮಾರು ಒಂದು ಕಿ.ಮೀ. ಹಿಂದಕ್ಕೆ ಓಡಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜೇಂದ್ರ ವರ್ಮಾ (32) ಚಲಿಸುತ್ತಿದ್ದ ರೈಲಿನಿಂದ ಬಿದ್ದಿದ್ದ ವ್ಯಕ್ತಿ. ಜೀವ ಉಳಿಸಿದ ಲೋಕೋಪೈಲಟ್ ಹೆಸರು ತಿಳಿದು ಬಂದಿಲ್ಲ. ಶುಕ್ರವಾರ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಆಗಿದ್ದೇನು?:
ರಾಜೇಂದ್ರ ಮಾನಸಿಕ ಅಸ್ವಸ್ಥನಾಗಿದ್ದು, ಕುಟುಂಬದ ಜೊತೆಗೆ ರಾಜಸ್ಥಾನದ ಬರಾನ್ ಜಿಲ್ಲೆಯ ಅಟ್ರು-ಸಲಾಪುರ್ ಮಾರ್ಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ರಾಜೇಂದ್ರ ಏಕಾಏಕಿ ಸಂಜೆ 4 ಗಂಟೆ ಸುಮಾರಿಗೆ ಸಲಾಪುರ್ ಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾರಿದ್ದಾನೆ.

TRAIN FINAL

ರಾಜೇಂದ್ರನನ್ನು ರಕ್ಷಿಸಲು ಹೋಗಿದ್ದ ಸಹೋದರ ವಿನೋದ್ ಆಯ ತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದರಿಂದಾಗಿ ತಕ್ಷಣವೇ ಅವರ ಸಹಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ, ಆಂಬುಲೆನ್ಸ್ ಗೆ ಫೋನ್ ಮಾಡಿದ್ದಾರೆ.

ರಾಜೇಂದ್ರ ಹಾಗೂ ವಿನೋದ್ ಬಿದ್ದ ಸ್ಥಳಕ್ಕೆ ರಸ್ತೆ ಸಂಪರ್ಕವಿರಲಿಲ್ಲ. ಹೀಗಾಗಿ ಆಂಬುಲೆನ್ಸ್ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದನ್ನು ಅರಿತ ಲೋಕೋ ಪೈಲಟ್ ರೈಲನ್ನು ಒಂದು ಕಿ.ಮೀ. ಹಿಂದಕ್ಕೆ ಚಾಲನೆ ಮಾಡಿ ಪ್ರಯಾಣಿಕರು ಬಿದ್ದಿದ್ದ ಸ್ಥಳವನ್ನು ತಲುಪಿದ್ದಾರೆ.

ಪ್ರಯಾಣಿಕರು ಬಿದ್ದ ಸ್ಥಳಕ್ಕೆ ರೈಲು ತಲುಪುತ್ತಿದ್ದಂತೆ ಕೆಲ ಪ್ರಯಾಣಿಕರು ಅವರನ್ನು ಎತ್ತಿಕೊಂಡು ರೈಲಿಗೆ ಹಾಕಿದ್ದಾರೆ. ಬಳಿಕ ಗಾಯಾಳುಗಳನ್ನು ಮುಂದಿನ ನಿಲ್ದಾಣದಲ್ಲಿ ಇಳಿಸಿ ಬರಾನ್‍ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಂಭೀರವಾಗಿ ಗಾಯಾಗೊಂಡಿದ್ದ ರಾಜೇಂದ್ರ ಹಾಗೂ ವಿನೋದ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದ್ದು, ಲೋಕೋ ಪೈಲಟ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *