ವಿಜಯಪುರ: ಪೂಜಾರಿಗಳ ಜಗಳದಿಂದ ದೇವಸ್ಥಾನಕ್ಕೆ ಬೀಗ ಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ನಗರದ ಸುಪ್ರಸಿದ್ಧ ಆದಿಲ್ ಶಾಹಿ ಕಾಲದ ಪವಾಡ ಬಸವೇಶ್ವರ ದೇವಸ್ಥಾನದ ಪೂಜೆ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದು, ಗರ್ಭಗುಡಿಗೆ ಬೀಗ ಹಾಕಲಾಗಿದೆ.
ಚಿನ್ನಿ ಕಾಲಿಮಠ ಮತ್ತು ನಂದಿಕೋಲಮಠ ಕುಟುಂಬಗಳು ಇಲ್ಲಿ 30 ವರ್ಷಗಳಿಂದ ಪೂಜೆ ಮಾಡುತ್ತಲೇ ಬಂದಿವೆ. ಚಿನ್ನಿಕಾಲಿಮಠ 11 ತಿಂಗಳು ಮತ್ತು ನಂದಿಕೋಲಮಠ 1 ತಿಂಗಳು ಪೂಜೆ ಮಾಡುವುದಾಗಿ ತೀರ್ಮಾನವಾಗಿತ್ತು. ಆದರೆ ಇದಕ್ಕೆ ಒಪ್ಪದ ನಂದಿಕೋಲಮಠ ಮತ್ತು ಚಿನ್ನಿಕಾಲಿಮಠ ಕುಟುಂಬಸ್ಥರು ಆಗಾಗ ಬಡಿದಾಡುತ್ತಿದ್ದರು. ಮತ್ತೆ ಭಾನುವಾರ ಬೆಳಿಗ್ಗೆ ಪೂಜೆ ಮಾಡಲು ಎರಡು ಕುಟುಂಬಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಗರ್ಭಗುಡಿಗೆ ಎರಡು ಕುಟುಂಬದವರು ಪ್ರತ್ಯೇಕ ಬೀಗ ಜಡಿದಿದ್ದಾರೆ. ಇದರಿಂದ ದೇವರ ದರ್ಶನಕ್ಕಾಗಿ ಬಂದ ನೂರಾರು ಭಕ್ತರು ದೇವರ ದರ್ಶನ ಪಡೆಯದೆ ವಾಪಸ್ ಹೋಗಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಗಲಾಟೆಗೆ ಬೇಸತ್ತ ಮಠದ ಕಮಿಟಿ ಮತ್ತು ಭಕ್ತರು ಆಕ್ರೋಶಗೊಂಡು ಇವರಿಬ್ಬರ ಮೇಲೂ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.