ಬೆಂಗಳೂರು: ಪುಟ್ಟಗೌರಿ ಮದುವೆ ನಂತರ ‘ಕನ್ನಡತಿ’ ಧಾರಾವಾಹಿ ಮೂಲಕ ಮನೆ ಮಾತಾಗಿರುವ ರಂಜನಿ ರಾಘವನ್ ಏನ್ ಮಾಡ್ತಿದ್ದಾರೆ ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಲಾಕ್ಡೌನ್ ಹಿನ್ನೆಲೆ ಧಾರಾವಾಹಿಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದ್ದು, ಎಲ್ಲ ವಾಹಿನಿಗಳು ಸಂಚಿಕೆಗಳನ್ನು ಮರು ಪ್ರಸಾರ ಮಾಡುತ್ತಿವೆ. ಹೀಗಿರುವಾಗ ರಂಜನಿ ಅವರ ಪೋಸ್ಟ್ ಇದೀಗ ಚರ್ಚೆಗೆ ಕಾರಣವಾಗಿದೆ. ಅದೇನಪ್ಪಾ ಅಂದ್ರೆ ಪುಟ್ಟಗೌರಿಗೆ ಕೆಲಸ ಬೇಕಂತೆ.
ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿರುತ್ತಿದ್ದ ನಟಿ ರಂಜನಿ ರಾಘವನ್ ಇದೀಗ ಮೆನಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ಆಗಾಗ ಪೋಸ್ಟ್ ಹಾಕುತ್ತಿರುತ್ತಾರೆ. ಇದೀಗ ಅವರು ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಪೋಸ್ಟ್ ಭಾರೀ ಸದ್ದು ಮಾಡುತ್ತಿದೆ. ಹೌದು ಇದ್ದಕ್ಕಿದ್ದಂತೆ ಕೆಲಸ ಕೇಳಿಕೊಂಡು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಪದವಿ ಮುಗಿಯುತ್ತಿದ್ದಂತೆ ರಂಜನಿ ರಾಘವನ್ ಅವರು ತಮ್ಮ ಪದವಿ ಪ್ರಮಾಣ ಪತ್ರವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರಂತೆ. ಇದೀಗ ಅದನ್ನು ಎಫ್ಬಿ ನೆನಪಿಸಿದೆ. ಮೂರು ವರ್ಷಗಳ ಹಿಂದಿನ ಪೋಸ್ಟ್ ನ್ನು ಎಫ್ಬಿ ನೆನಪಿಸಿತು. ನಾನು ಕಾನ್ವಕೇಶನ್ ಪಡೆದು ಮೂರು ವರ್ಷಗಳಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಕನ್ನಡದಲ್ಲಿ ‘ಯಾವ್ದಾದ್ರೂ ಕೆಲಸ ಖಾಲಿ ಇದ್ಯಾ?’ ಎಂದು ಕೇಳಿದ್ದಾರೆ.
ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ನಟನೆಯಲ್ಲಿ ಗುರುತಿಸಿಕೊಂಡ ರಂಜನಿ ರಾಘವನ್ ಅವರಿಗೆ ಸಿನಿಮಾಗಳಲ್ಲಿಯೂ ಅವಕಾಶಗಳು ಬರಲಾರಂಭಿಸಿದವು. ಈಗಾಗಲೇ ರಾಜಹಂಸ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಟಕ್ಕರ್ ಕೊಡಲು ಸಿದ್ಧವಾಗ್ತಿದ್ದಾರೆ. ಈಗಾಗಲೇ ಕನ್ನಡತಿ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ಭುವನೇಶ್ವರಿ, ಮತ್ತೊಂದೆಡೆ ಸಿನಿಮಾಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕನ್ನಡತಿ ಧಾರಾವಾಹಿ ತುಂಬಾ ವಿಭಿನ್ನವಾಗಿ ಮೂಡಿಬಂದಿದ್ದು, ಇದರಲ್ಲಿ ಕನ್ನಡ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಈ ಧಾರಾವಾಹಿ ಸಖತ್ ಸದ್ದು ಮಾಡುತ್ತಿದೆ.
ಧಾರವಾಗಿಗಳೊಟ್ಟಿಗೆ ಸಿನಿಮಾಗಳತ್ತಲೂ ರಂಜನಿ ಚಿತ್ತ ಹರಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಳಿಯ ಮನೋಜ್ ಕುಮಾರ್ ಅಭಿನಯದ ಟಕ್ಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ, ಧಾರಾವಾಹಿ ಎರಡರಲ್ಲೂ ಬ್ಯುಸಿಯಾಗಿರುವಾಗಲೇ ಕೊರೊನಾ ವೈರಸ್ನಿಂದಾಗಿ ಲಾಕ್ಡೌನ್ ಜಾರಿಯಾಯಿತು. ಹೀಗಾಗಿ ಎರಡರ ಚಿತ್ರೀಕರಣ ಸ್ಥಗಿತಗೊಂಡಿದೆ. ಸದ್ಯ ಮನೆಯಲ್ಲಿ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ.