– ಒಂದು ಕಡೆ ಕೊರೊನಾ, ಮತ್ತೊಂದೆಡೆ ಮಳೆ ಕಾಟ
ಗದಗ: ಒಂದು ಕಡೆ ಕೊರೊನಾ ಲಾಕ್ಡೌನ್ ಹಾವಳಿಯಿಂದ ಜನ ಕಂಗಾಲಾಗಿದ್ದು, ಇದೀಗ ವರುಣದೇವ ಸಹ ಅವಾಂತರ ಸೃಷ್ಟಿಸಿ ಗದಗಿನ ಜನರನ್ನು ಸಂಕಷ್ಟಕ್ಕೆ ದೂಡಿದ್ದಾನೆ.
ರಾತ್ರಿ ಸುರಿದ ಮಳೆಯಿಂದ ಗದಗ ನಗರದ ಎಸ್.ಎಂ.ಕೃಷ್ಣಾ ನಗರದಲ್ಲಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಎಸ್.ಎಂ.ಕೃಷ್ಣಾ ನಗರವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಇದರಿಂದಾಗಿ ಜನ ಭಯದಲ್ಲೇ ಜೀವನ ಸಾಗಿಸುತ್ತಿದ್ದು, ಇದೀಗ ಮಳೆಯಿಂದಾಗಿ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ.
ಒಂದೆಡೆ ಲಾಕ್ಡೌನ್ನಿಂದ ಮನೆಯಿಂದ ಹೊರಗಡೆ ಬಾರಲಾರದ ಪರಿಸ್ಥಿತಿ ಇದೆ. ಇನ್ನೊಂದೆಡೆಗೆ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ನೀರು ಮನೆಯೊಳಗೆ ನುಗ್ಗಿ ಪರದಾಡುವಂತಾಗಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಚರಂಡಿ ಇಲ್ಲದೆ ರಸ್ತೆಗಳಲ್ಲಿನ ನೀರು ಮನೆಗಳಿಗೆ ನುಗ್ಗಿದೆ. ಇದರಿಂದಾಗಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮನೆಯಲ್ಲಿನ ವಸ್ತುಗಳೆಲ್ಲವೂ ನೀರಲ್ಲಿ ತೇಲಾಡುತ್ತಿವೆ. ದವಸಧಾನ್ಯ ಸೇರಿದಂತೆ ಗೃಹೋಪಯೋಗಿ ವಸ್ತುಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು, ಜನರ ಬದುಕನ್ನು ಅತಂತ್ರ ಮಾಡಿದೆ.
ರಾಜ್ಯದ ಹಲವೆಡೆ ಮಳೆಯಾಗಿದ್ದು, ಒಂದು ಕಡೆ ಲಾಕ್ಡೌನ್ ಇನ್ನೊಂದೆಡೆ ಮಳೆ ಎರಡರ ಮಧ್ಯೆ ಸಿಲುಕಿಕೊಂಡು ಜನ ಪರದಾಡುವಂತಾಗಿದೆ.