– ಬೆಲೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ನೆರವು
– ಅಕ್ಕಿ, ಬೇಳೆ ಜೊತೆ ರೈತರಿಂದ ಖರೀದಿಸಿದ ತರಕಾರಿ ಹಂಚಿಕೆ
ಕೋಲಾರ: ಕೊರೊನಾ ಲಾಕ್ಡೌನ್ನಿಂದಾಗಿ ರೈತರು ಬೆಳೆಗಳನ್ನು ಮಾರಾಟ ಮಾಡಲಾಗದೆ ಕಂಗಾಲಾಗಿದ್ದು, ಬೆಲೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕ ಕೆ.ವೈ.ನಂಜೇಗೌಡ ಕ್ಷೇತ್ರದ ರೈತರು ಹಾಗೂ ಹಸಿದವರಿಗೆ ನೆರವಾಗಿದ್ದಾರೆ.
ದೇಶದ ಅದೆಷ್ಟೋ ರೈತರು ತಾವು ಬೆಳೆದ ಬೆಳೆಗಳನ್ನು ಬೀದಿಗೆ ಸುರಿದು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನರಿತ ಕೋಲಾರ ಜಿಲ್ಲೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಮ್ಮ ಕ್ಷೇತ್ರದ ರೈತರ ನೆರವಿಗೆ ನಿಲ್ಲಬೇಕೆಂದು ನಿರ್ಧರಿಸಿ ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ತಾವೇ ಖರೀದಿ ಮಾಡಿ ಅದನ್ನು ತಮ್ಮ ಕ್ಷೇತ್ರದಲ್ಲಿನ ಬಿಪಿಎಲ್ ಕಾರ್ಡುದಾರರಿಗೆ ಹಂಚಲು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ವತಃ ಶಾಸಕರೇ ತಮ್ಮ ಕ್ಷೇತ್ರದಲ್ಲಿ ತರಕಾರಿ ಬೆಳೆದಿರುವ ರೈತರ ತೋಟಗಳಿಗೆ ತೆರಳಿ ಎಲೆಕೋಸು, ಟೊಮ್ಯಾಟೋ, ಕುಂಬಳಕಾಯಿ, ಸೇರಿದಂತೆ ಹಲವು ಬೆಳೆಗಳನ್ನು ರೈತರಿಗೂ ನಷ್ಟವಾಗದಂತೆ, ಬೆಳೆಯೂ ಹಾಳಾಗದಂತೆ ಖರೀದಿಸಿ ಜನರಿಗೆ ಹಂಚಲು ನಿರ್ಧರಿಸಿದ್ದಾರೆ.
ಈ ಮೂಲಕ ಶಾಸಕ ನಂಜೇಗೌಡ ವಿಭಿನ್ನವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ರೈತರಿಗೂ ಅನುಕೂಲವಾಗಬೇಕು ಜೊತೆಗೆ ಹಸಿದವರ ಹೊಟ್ಟೆಯೂ ತುಂಬಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಮಾಲೂರು ತಾಲೂಕಿನ ಅನಿಗಾನಹಳ್ಳಿ, ಓಬಟ್ಟಿ, ಟೇಕಲ್ನ ವಿವಿಧ ರೈತರ ತೋಟಗಳಿಗೆ ತೆರಳಿ ತರಕಾರಿ ಖರೀದಿಸಿದ್ದಾರೆ. ಇದರಿಂದ ರೈತರಿಗೂ ಅನುಕೂಲ ವಾಗಿದ್ದು, ಹಾಳಾಗುತ್ತಿದ್ದ ಬೆಳೆಯಿಂದ ಕೊನೆ ಪಕ್ಷ ನಾವು ಹಾಕಿದ ಬಂಡವಾಳವಾದರೂ ಸಿಕ್ಕರೆ ಸಾಕು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಬಡವರ ಹೊಟ್ಟೆ ಸಹ ತುಂಬುತ್ತಿದೆ.