ರಾಯಚೂರು: ಕೊರೊನಾ ವೈರಸ್ ಭೀತಿಯ ಮಧ್ಯೆ ಪಿಂಚಣಿ ಪಡೆಯಲು ನಗರದ ಮುಕರಮಗಂಜ್ ಉಪ ಅಂಚೆ ಕಚೇರಿ ಮುಂದೆ ಜನ ಮುಗಿಬಿದ್ದು ಪರದಾಡಿದ್ದಾರೆ.
ಕೊರೊನಾ ಹರಡುವಿಕೆಯ ಭೀತಿ ಹಿನ್ನೆಲೆ ದೇಶವೇ ಲಾಕ್ ಡೌನ್ ಆಗಿದ್ದರೂ ಲೆಕ್ಕಿಸದೇ ಪಿಂಚಣಿಗಾಗಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅಂಚೆ ಕಚೇರಿ ಮುಂದೆ ಪಿಂಚಣಿಗಾಗಿ ವೃದ್ಧರು, ವಿಧವೆಯರು ಅಂಗವಿಕಲರು ಜಮಾಯಿಸಿದ್ದರು. ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಿಂಚಣಿದಾರರು ಪಿಂಚಣಿಗಾಗಿ ಮನವಿ ಮಾಡಿದರು.
ಐದು ತಿಂಗಳಿಂದ ಪಿಂಚಣಿಯಿಲ್ಲದೆ ಬದುಕು ಕಷ್ಟವಾಗಿದೆ. ದಯವಿಟ್ಟು ಪಿಂಚಣಿ ಹಣ ನೀಡಿ ಅಂತ ಒತ್ತಾಯಿಸಿದರು. ಸುಮಾರು ಹೊತ್ತು ಅಂಚೆ ಕಚೇರಿಯಲ್ಲಿ ಜನ ಜಮಾಯಿಸಿದ್ದರೂ ಅಂಚೆ ಇಲಾಖೆ ಸಿಬ್ಬಂದಿಯಾಗಲಿ, ಪೊಲೀಸ್ ಇಲಾಖೆ ಸಿಬ್ಬಂದಿಯಾಗಲಿ ಸ್ಥಳಕ್ಕಾಗಮಿಸಿ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ.
ಈಗಾಗಲೇ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದ್ದರು ಎಚ್ಚೆತ್ತುಕೊಳ್ಳದ ಜನ ಗುಂಪುಗುಂಪಾಗೇ ಅಂಚೆ ಕಚೇರಿ ಮುಂದೆ ಕುಳಿತಿದ್ದರು. ಇನ್ನೊಂದೆಡೆ ಪಿಂಚಣಿ ಸಿಗದಿರುವುದರಿಂದ ವೃದ್ಧರು, ಅಂಗವಿಕಲರು ಪರದಾಡುತ್ತಿದ್ದಾರೆ. ದೇಶವೇ ಲಾಕ್ಡೌನ್ ಆಗಿರುವುದರಿಂದ ದುಡಿಯಲು ಕೆಲಸವೂ ಇಲ್ಲಾ ಇತ್ತ ಪಿಂಚಣಿಯೂ ಇಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.