ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಅಕ್ರಮವಾಗಿ ಕಸಾಯಿಖಾನೆಗಳು ಎಗ್ಗಿಲ್ಲದೆ ಸಾಗಿದ್ದು ಪೊಲೀಸ್ ಇಲಾಖೆ ಕಣ್ಣು ಮುಚ್ಚಿಕೊಂಡಿದೆ. ಗೋವುಗಳ ಮಾರಣಹೋಮಕ್ಕೆ ಈ ದೃಶಾವಳಿಗಳು ಸಾಕ್ಷಿಯಾಗಿದೆ.
ಬೀದರ್ ತಾಲೂಕಿನ ಕಂಗನಕೋಟೆ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಬಳಿ ಹಲವು ವರ್ಷಗಳಿಂದ ಕಾಸಾಯಿಖಾನೆ ಅಕ್ರಮವಾಗಿ ನಡೆಯುತ್ತಿದ್ದು, ಗೋವುಗಳ ಕತ್ತು, ಕಾಲು, ಮೂಳೆ, ಕೊಂಬುಗಳು ಸೇರಿದಂತೆ ಗೋವುಗಳ ಅಸ್ಥಿಪಂಜರಗಳು ರಾಶಿ ರಾಶಿಯಾಗಿ ಪತ್ತೆಯಾಗಿವೆ. ಕಂಗನಕೋಟೆ, ಮಂದಕನಹಳ್ಳಿ, ಶೆಮಶ್ನಗರ್ ಮತ್ತು ಕೆಲ ತಾಂಡಗಳು ಸೇರಿದಂತೆ ಎಲ್ಲಾ ಗ್ರಾಮದ ಜನರು ಅಕ್ರಮ ಕಸಾಯಿಖಾನೆಯ ವಾಸನೆಗೆ ಬೇಸತ್ತು ಹೋಗಿದ್ದಾರೆ.
ಇಂದು ಆಕ್ರೋಶಗೊಂಡ ಜನ ಕಸಾಯಿಖಾನೆಗೆ ನುಗ್ಗಿ ಟಿನ್ಗಳನ್ನು ಒಡೆದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಕಸಾಯಿಖಾನೆ ವಾಸನೆಯಿಂದ ಊಟ ಮಾಡಲು ಅಸಾಧ್ಯವಾಗಿದೆ. ವಾಂತಿಯಾಗುವಷ್ಟರ ಮಟ್ಟಿಗೆ ಇಲ್ಲಿ ವಾಸನೆಯಿದೆ. ಈ ಬಗ್ಗೆ ಅಶೋಕ್ ಖೇಣಿ ಹಾಗೂ ಪೊಲೀಸರ ಗಮನಕ್ಕೆ ತಂದರೂ ಇಬ್ಬರೂ ಸಹ ತಲೆಕೆಡಿಸಿಕೊಂಡಿಲ್ಲ. ಸಿಂಗಪುರ್ ಮಾಡುವುದಾಗಿ ಹೇಳಿ ನಮ್ಮ ಗ್ರಾಮಗಳನ್ನು ಕೊಳಕು ಗ್ರಾಮಗಳನ್ನಾಗಿ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದೇವೆ. ಅವರು ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದರು. ಆದ್ರೆ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅವಾಗ ಸಣ್ಣ ಪ್ರಮಾಣದ ಕಸಾಯಿಖಾನೆಯಿತ್ತು. ಜನ ಈ ಬಗ್ಗೆ ಗಮನಹರಿಸದ ಹಿನ್ನೆಲೆಯಲ್ಲಿ ಇದೀಗ ದೊಡ್ಡ ಪ್ರಮಾಣದಲ್ಲಿ ವಹಿವಾಟುಗಳು ನಡೆಯುತ್ತಿವೆ. ಸಂಜೆಯ ಹೊತ್ತಲ್ಲಿ ತಂಪುಗಾಳಿಯ ಜೊತೆ ದುರ್ವಾಸನೆಯೂ ಬರುತ್ತಿದೆ. ಒಟ್ಟಿನಲ್ಲಿ ನೆಮ್ಮದಿಯಾಗಿ ಮಲಗಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ ಅಂತಾ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ರು.