ಮಂಗಳೂರು: ಡ್ಯಾಂ ನಲ್ಲಿ ಈಜಾಡೋಕೆ ಹೋಗಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿದ ಘಟನೆ ನಗರದ ಮರವೂರಿನಲ್ಲಿ ನಡೆದಿದೆ.
ಬಜ್ಪೆ ನಿವಾಸಿ ಶರತ್ ಸ್ಥಳೀಯರು ರಕ್ಷಿಸಿದ ಯುವಕ. ಫಲ್ಗುಣಿ ನದಿಗೆ ಅಡ್ಡಲಾಗಿ ಮರವೂರು ಡ್ಯಾಂ ಇದೆ. ಇತ್ತೀಚೆಗೆ ಅಧಿಕ ಮಳೆಯಾಗಿದ್ದರಿಂದ ಡ್ಯಾಂ ಭರ್ತಿಯಾಗಿತ್ತು. ಆದ್ದರಿಂದ ನೀರನ್ನು ಹೊರಬಿಡಲಾಗುತ್ತಿದೆ. ಸ್ನೇಹಿತರ ಜೊತೆ ಡ್ಯಾಂ ನೋಡೋಕೆ ಹೋಗಿದ್ದ ಶರತ್ ಈಜಾಡಲು ನೀರಿಗೆ ಇಳಿದಿದ್ದಾನೆ. ಈ ವೇಳೆ ನೀರಿನ ಸೆಳೆತ ಜಾಸ್ತಿ ಕಾರಣ ಶರತ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಸ್ಥಳದಲ್ಲಿದ್ದ ಸ್ಥಳೀಯ ಜತೀನ್ ಡಿಸೋಜಾ, ಶರತ್ ನೀರಿನ ಸೆಳೆತಕ್ಕೆ ಒಳಗಾಗಿದ್ದನ್ನು ಗಮನಿಸಿ ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ. ನಂತರ ಟ್ಯೂಬ್ ಮತ್ತು ಹಗ್ಗದ ಮೂಲಕ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಜೀವ ಪಣಕಿಟ್ಟು ಜತೀನ್ ಡಿಸೋಜಾ ಯುವಕನನ್ನು ರಕ್ಷಣೆ ಮಾಡಿದ್ದು, ಯುವಕನ ಪ್ರಾಣ ಉಳಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಯುವಕನೊಬ್ಬ ಡ್ಯಾಂನಲ್ಲಿ ಮುಳುಗಿ ಮೃತಪಟ್ಟಿದ್ದನು. ಮತ್ತೊಂದು ಅನಾಹುತ ನಡೆಯುವ ಮುನ್ನ ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ದಾರೆ.