ಕೊಪ್ಪಳ: ನಕಲಿ ಮತದಾರನ್ನು ಕರೆತಂದ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಜಗಳವನ್ನು ನಿಲ್ಲಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಗರದ ಹಮಾಲರ ಕಾಲೊನಿಯ 3ನೇ ವಾರ್ಡ್ ನಲ್ಲಿ ನಡೆದಿದೆ.
ಇಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರು ಕೊಪ್ಪಳ ಸಮೀಪದ ಹಾಲರ್ತಿ, ಹೂವಿನಾಳ ಹಾಗೂ ಕುನಿಕೇರಿ ಗ್ರಾಮದಿಂದ ಜನರು ಕರೆಸಿ ಮತದಾನ ಮಾಡಿಸುತ್ತಿದ್ದಾರೆ. ಮತದಾರ ಪಟ್ಟಿಯಲ್ಲಿ ಬೇರೆ ಗ್ರಾಮಗಳ ಜನರ ಹೆಸರು ಇದೆ, ಅದನ್ನು ಪರೀಶಿಲನೆ ಮಾಡಬೇಕೆಂದು ಜಿಲ್ಲಾ ಚುನಾವಣೆ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದೇವು. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಅಕ್ರಮ ಮತದಾನ ನಡೆಯುತ್ತಿದೆ ಎಂದು ಜೆಡಿಎಸ್ ಅಭ್ಯರ್ಥಿ ಮಹ್ಮದ್ ಶಫಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯು ಸೋಲುವುದು ಖಚಿತವಾಗಿದ್ದು, ಠೇವಣಿ ಉಳಿಯಬೇಕು ಎನ್ನುವ ಉದ್ದೇಶದಿಂದ ನಕಲಿ ಮತದಾನಕ್ಕೆ ಮುಂದಾಗಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಹಣ ನೀಡಿ, ಕರೆಸಲಾಗುತ್ತಿದೆ. ಅವರನ್ನು ನಾವು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ, ಪೊಲೀಸರು ವಶಕ್ಕೆ ಪಡೆದು ಬಳಿಕ ಕೈಬಿಡುತ್ತಿದ್ದಾರೆ. ಅಕ್ರಮವಾಗಿ ನಡೆಯುತ್ತಿರುವ ಚುನಾವಣೆಯನ್ನು ರದ್ದುಗೊಳಿಸಿ, ಮರು ಚುನಾವಣೆಗೆ ಆದೇಶ ಹೊರಡಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಬೇರೆ ಗ್ರಾಮಗಳಿಂದ ಮತಗಟ್ಟೆಗೆ ಬಂದಿದ್ದ ಕೆಲವರನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದರು. ಈ ವೇಳೆ ಭಾರೀ ಪ್ರಮಾಣದಲ್ಲಿ ಜನರು ಗಲಾಟೆ ಮಾಡಿದ್ದರಿಂದ ಅವರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv