ಹಾಸನ: ಶಿಕ್ಷಕಿಯೊಬ್ಬರ ಕ್ರೌರ್ಯಕ್ಕೆ ವಿದ್ಯಾರ್ಥಿಯೋರ್ವ ಕಣ್ಣು ಕಳೆದುಕೊಂಡ ಘಟನೆ ಜಿಲ್ಲೆಯ ಹೊರವಲಯದ ಎಲ್ವಿಜಿಎಸ್ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿ ಮನಿಷ್ ದೃಷ್ಟಿ ಕಳೆದುಕೊಂಡಿದ್ದಾನೆ. ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಗಿರಿಜಾ ಅವರ ವಿರುದ್ಧ ಈ ಆರೋಪ ಕೇಳಿಬಂದಿದೆ. ಮನಿಷ್ ಎಲ್ಕೆಜಿಯಲ್ಲಿ ವ್ಯಾಸಂಗ ವಾಡುತ್ತಿದ್ದಾನೆ. ಅಗಸ್ಟ್ 13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಶಿಕ್ಷಕಿ ಮನಿಷ್ ಕಣ್ಣಿಗೆ ಕಬ್ಬಿಣದ ಸ್ಕೇಲ್ನಿಂದ ಹಲ್ಲೆ ಮಾಡಿದ್ದಾರೆ. ಹೀಗಾಗಿ ನಮ್ಮ ಮಗನಿಗೆ ಕಣ್ಣು ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಪೋಷಕರು ಶಿಕ್ಷಕಿ ವಿರುದ್ಧ ಆರೋಪಿಸಿದ್ದಾರೆ.
ಶಿಕ್ಷಕಿ ಹಲ್ಲೆ ನಡೆಸಿದ ದಿನದಿಂದ ವಿದ್ಯಾರ್ಥಿ ಕಣ್ಣು ನೋವು ಎಂದು ಹೇಳುತ್ತಿದ್ದನು. ಹೀಗಾಗಿ ವೈದ್ಯರ ಬಳಿ ಚಿಕಿತ್ಸೆಗೆ ಪೋಷಕರು ವಿದ್ಯಾರ್ಥಿಯನ್ನು ಕರೆದುಕೊಂಡ ಹೋದಾಗ ಆತನ ಕಣ್ಣಿಗೆ ಬಲವಾಗಿ ಹಾನಿಯಾಗಿದೆ ಎಂಬ ಸತ್ಯಾಂಶ ಹೊರಬಿದ್ದಿದೆ. ಹೀಗಾಗಿ ಶಿಕ್ಷಕಿಯ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿದ್ದಾನೆ. ಇದರಿಂದ ಪೋಷಕರು ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದಾರೆ.
ಹಾಗೆಯೇ ಈ ಬಗ್ಗೆ ಪೊಲೀಸರಿಗೆ ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.