ಬಾಗಲಕೋಟೆ: ಮಗ ಹಾಗೂ ತಮ್ಮಂದಿರು ಸೇರಿ ಮನೆಯ ಯಜಮಾನನ್ನೇ ಕೊಲೆಮಾಡಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಕೊಡಿಹಾಳ ಗ್ರಾಮದಲ್ಲಿ 2016 ಅಕ್ಟೋಬರ್ 29 ರಂದು ನಡೆದಿದೆ. ಸದ್ಯ ಲೈವ್ ಮರ್ಡರ್ ವಿಡಿಯೋ ವಾಟ್ಸಪ್ನಲ್ಲಿ ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಮಲ್ಲಪ್ಪ ಕೈರವಾಡಗಿ ಎಂಬವರೇ ಮಕ್ಕಳು ಮತ್ತು ಸಹೋದರರಿಂದ ಕೊಲೆಯಾದ ವ್ಯಕ್ತಿ. ಆಸ್ತಿ ವಿಚಾರವಾಗಿ ತಂದೆ ಮಲ್ಲಪ್ಪ ಹಾಗೂ ಮಗ ದೇವಪ್ಪ ಮಧ್ಯೆ ಗಲಾಟೆಯಾಗಿತ್ತು. ದೇವಪ್ಪ ಹಾಗು ಮಲ್ಲಪ್ಪರ ಸಹೋದರ ಶಿವಪ್ಪ ತಮ್ಮ ಸಹಚರೊಂದಿಗೆ ಸೇರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಪ್ಪರನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ಏನಿದು ಪ್ರಕರಣ?: ಕೋಡಿಹಾಳ ಗ್ರಾಮದ ನಿವಾಸಿಯಾಗಿರುವ ಮಲ್ಲಪ್ಪ 20 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದ್ದರು. ಆದರೆ ಮಲ್ಲಪ್ಪರ ಮಗ ದೇವಪ್ಪ ತನಗೆ ಆಸ್ತಿಯಲ್ಲಿ ಪಾಲು ಬೇಕೆಂದು ಜಗಳ ಮಾಡಿಕೊಂಡಿದ್ದನು. ಮಲ್ಲಪ್ಪ ಅವರು ದೇವಪ್ಪನಿಗೆ ಅವನ ಪಾಲಿನ ಆಸ್ತಿಯನ್ನು ಹಂಚಿಕೊಟ್ಟು, ತಮ್ಮ ಜೀವನೋಪಯಾಕ್ಕಾಗಿ 4 ಎಕರೆ ಭೂಮಿಯನ್ನು ಉಳಿಸಿಕೊಂಡಿದ್ರು. ಈ ವಿಚಾರವಾಗಿ ತಂದೆ ಮತ್ತು ಮಗನ ಮಧ್ಯೆ ಆಗಾಗ ಗಲಾಟೆಗಳು ನಡೆಯುತ್ತಿತ್ತು. ಕೊನೆಗೆ ದೇವಪ್ಪ ತನ್ನ ಚಿಕ್ಕಪ್ಪಂದಿರ ಸಹಾಯದಿಂದ ತಂದೆಯನ್ನು ಕೊಲೆ ಮಾಡಿದ್ದಾನೆ.
ಹೊಲದಲ್ಲಿ ದೇವಪ್ಪ, ಶಿವಪ್ಪ ಸೇರಿ ಹಲವರು ಮಲ್ಲಪ್ಪನ ಮೇಲೆ ಹಲ್ಲೆ ಮಾಡುವ ವೇಳೆ ಪಕ್ಕದ ಹೊಲದ ರೈತರು ತಡೆಯಲು ಮುಂದಾಗಿದ್ದರು. ಆದರೆ ದೇವಪ್ಪ ಮಲ್ಲಪ್ಪನ ನೆರವಿಗೆ ಬಂದ ಗ್ರಾಮಸ್ಥರಿಗೆ ಕೊಲೆಯ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಕೊಲೆಯ ನಂತರ ಮೃತ ದೇಹವನ್ನು ಗ್ರಾಮಕ್ಕೆ ತಂದು ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ಮಾಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: 2016 ಅಕ್ಟೋಬರ್ನಲ್ಲಿ ಕೊಲೆ ಮಾಡವಾಗ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದು, ಅದನ್ನು ಈಗ ಯಾರೋ ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಇಳಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.