ಚಿಕ್ಕಬಳ್ಳಾಪುರ: ಕೆಎಸ್ಆರ್ ಪಿ ಪೇದೆಯೊಬ್ಬರು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕು ಮೂಡಚಿಂತಹಳ್ಳಿಯಲ್ಲಿ ನಡೆದಿದೆ.
ಸುನೀಲ್ ಕುಮಾರ್ (24) ಆತ್ಮಹತ್ಯೆ ಮಾಡಿಕೊಂಡ ಕೆಎಸ್ಆರ್ ಪಿ ಪೇದೆ. 15 ದಿನಗಳ ಹಿಂದೆ ತರಬೇತಿ ಪೂರೈಸಿ ಬೆಂಗಳೂರು ಹಲಸೂರು ವಿಭಾಗದಲ್ಲಿ ವೃತ್ತಿ ಪ್ರಾರಂಭಿಸಿದ್ದರು.
ಸುನೀಲ್ ಕುಮಾರ್ ಅವರು ರಜೆ ಪಡೆದು ಭಾನುವಾರ ಸ್ವಗ್ರಾಮಕ್ಕೆ ಬಂದಿದ್ದು, ಗೆಳೆಯರೊಂದಿಗೆ ಗ್ರಾಮದ ಕೃಷಿಹೊಂಡಕ್ಕೆ ಹೋಗಿ ಈಜಾಡಿ ಮನೆಗೆ ಮರಳಿದ್ದಾರೆ. ಆದರೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ತಮ್ಮ ಮೊಬೈಲ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮಾತ್ರೆ ನುಂಗುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ.
ಅತಿಯಾಗಿ ಮಾತ್ರೆ ಸೇವಿಸಿದ್ದ ಸುನೀಲ್ ವಾಂತಿ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಪೋಷಕರು ಅವರನ್ನು ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಅಗತ್ಯವಾಗಿದ್ದರಿಂದ ಹೊಸಕೋಟೆಯ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸುನೀಲ್ ಮೃತಪಟ್ಟಿದ್ದಾರೆ.
ಆತ್ಮಹತ್ಯೆಗೆ ಯಾವುದೇ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಈ ಕುರಿತು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತ ಸುನೀಲ್ ಬಳಸುತ್ತಿದ್ದ ಎರಡು ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.