-ಎಣ್ಣೆಗೆ ಡಬಲ್ ಹಣ ನೀಡಿ ಬಡವರಾಗ್ತಿದ್ದೀವಿ
-ಮುಖ್ಯಮಂತ್ರಿಗಳೇ ನಾವ್ ಬಡವರಾಗೋದನ್ನ ತಪ್ಪಿಸಿ
ಯಾದಗಿರಿ: ಎರಡು ಕೆ.ಜಿ. ರೇಷನ್ ಬೇಕಾದ್ರೆ ಕಡಿಮೆ ಕೊಡಿ. ಆದ್ರೆ ಮದ್ಯ ಮಾರೋದನ್ನ ನಿಲ್ಲಿಸಬೇಡಿ ಎಂದು ಜಿಲ್ಲೆತ ಶಹಾಪುರ ತಾಲೂಕಿನ ಮೂಡಬೋಳ ಗ್ರಾಮದ ಕುಡುಕನೊಬ್ಬ ಸಿಎಂ ಬಳಿ ಮನವಿ ಮಾಡಿದ್ದಾನೆ.
ಮಾನ್ಯ ಮುಖ್ಯಮಂತ್ರಿಗಳು ಲಾಕ್ಡೌನ್ ಘೋಷಿಸಿ ಒಳ್ಳೆಯದು ಮಾಡಿದ್ದೀರಿ. ನಿಮ್ಮ ಮಾತಿಗೆ ಬೆಲೆ ಕೊಟ್ಟು ಮನೆಯಲ್ಲಿಯೇ ಉಳಿದುಕೊಂಡಿದ್ದೇವೆ. ಎರಡು ತಿಂಗಳ ಪಡಿತರವನ್ನು ನೀಡಿದ್ದೀರಿ. ಆದ್ರೆ ನೀವು ನಮ್ಮ ಕಷ್ಟವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಮದ್ಯ ಮಾರಾಟ ಬಂದ್ ಆಗಿದ್ದರಿಂದ 100-200 ರೂ.ಗೆ ಸಿಗುವ ಬಾಟಲ್ ಗಳಿಗೆ 500 ರಿಂದ 600 ರೂ. ನೀಡಬೇಕಾಗಿದೆ. ಇಷ್ಟೊಂದು ಹಣ ನೀಡಿ ಮದ್ಯ ಖರೀದಿ ಮಾಡೋದರಿಂದ ಬಡವರಾಗುತ್ತಿದ್ದೇವೆ ಎಂದು ಕುಡುಕ ತನ್ನ ಅಳಲು ತೋಡಿಕೊಂಡಿದ್ದಾನೆ.
ರಾತ್ರಿ-ಹಗಲು ಎನ್ನದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂಜೆ ವೇಳೆ ಒಂದು ಪೆಗ್ ಹಾಕಿದ್ರೆ ನಿದ್ದೆ ಬರುತ್ತೆ. ಎಣ್ಣೆ ಇಲ್ಲ ಅಂದ್ರೆ ನಮಗೆ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ನಾವು ಬಡವರಾಗೋದನ್ನ ತಪ್ಪಿಸಿ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾನೆ.
ಸ್ಥಳೀಯ ಮಟ್ಟದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನ ಕಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿಯೂ ಆತ ಕಂಠಪೂರ್ತಿ ಕುಡಿದಿದ್ದಾನೆ. ಆತನಿಗೆ ಮದ್ಯ ಹೇಗೆ ಸಿಕ್ತು? ಶಹಪುರ ಪಟ್ಟಣದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗ್ತಿರೋದನ್ನ ಸಹ ಕುಡುಕ ಹೇಳಿದ್ದಾನೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.