ಮತ್ತೆ ಕಾಂಗ್ರೆಸ್‌ನಲ್ಲಿ ಲಿಂಗಾಯತ ಬಾಂಬ್‌: ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗ್ತಾರಾ ಸಿಎಂ?

Public TV
2 Min Read
Siddaramaiah 9

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಲಿಂಗಾಯತ ವಿರೋಧಿ ಆರೋಪ ಮತ್ತೆ ಕೇಳಿ ಬಂದಿದೆ. ಅಂದು ಪ್ರತ್ಯೇಕ ಲಿಂಗಾಯತ ಧರ್ಮದ (Lingayat Religion) ಜೇನುಗೂಡಿಗೆ ಕೈ ಹಾಕಿ ಸಿದ್ದರಾಮಯ್ಯ ವಿವಾದಕ್ಕೆ ಗುರಿಯಾಗಿದ್ದರು. ಈಗ ಯಾವುದೇ ವಿವಾದ ಇಲ್ಲದಿದ್ದರೂ ಸಹ ಸಿದ್ದರಾಮಯ್ಯ ವಿರುದ್ಧ ಅದೇ ಆರೋಪವಿದೆ.

ಅಂದು ನಡೆದ ರೀತಿಯಲ್ಲಿ ಡ್ಯಾಮೇಜ್ ಕಂಟ್ರೋಲ್‌ ಸ್ಟಾಟರ್ಜಿಗೆ ಸಿಎಂ ಮುಂದಾಗ್ತಾರಾ ಎಂಬುದೇ ಪ್ರಶ್ನೆ. ಅಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಲಿಂಗಾಯತ ವಿರೋಧಿ ಹಣೆಪಟ್ಟಿ ಅಂಟಿಕೊಂಡಿತ್ತು. ಈಗ ಸುಭದ್ರ ಸರ್ಕಾರವಿದ್ದರೂ ಸಹ ಸ್ವಪಕೀಯ ಲಿಂಗಾಯತ ನಾಯಕರೇ ಲಿಂಗಾಯತ ವಿರೋಧಿ ಆರೋಪ ಮಾಡಿದ್ದಾರೆ. ಅದರಲ್ಲೂ ಶಾಮನೂರು ಶಿವಶಂಕರಪ್ಪ (Shamanur Shivashankarappa ) ನೇರನೇರವಾಗಿಯೇ ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ.

 

ಲೋಕಸಭಾ ಚುನಾವಣೆ (Lok Sabha Election) ಸಂದರ್ಭದಲ್ಲಿ ಕೇಳಿ ಬಂದ ಈ ಆರೋಪ ಸಿದ್ದರಾಮಯ್ಯ ಪಾಲಿಗೆ ಸವಾಲಾಗಿ ಮಾರ್ಪಾಡಾಗಿದೆ. ಆರೋಪವನ್ನು ಹಾಗೆಯೇ ಬಿಟ್ಟರೆ ದೊಡ್ಡ ಸ್ವರೂಪ ಪಡೆಯಬಹುದು. ಡ್ಯಾಮೇಜ್ ಕಂಟ್ರೋಲ್ ಮಾಡಬೇಕಾದ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ ಸಿಲುಕಿದ್ದಾರೆ. ಇದನ್ನೂ ಓದಿ: ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

ಶಾಮನೂರು ಹೇಳಿದ್ದೇನು?
ಸರ್ಕಾರದಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ. ನಿಜಲಿಂಗಪ್ಪ, ಜೆ.ಎಚ್.ಪಾಟೇಲರು ಇದ್ದಾಗ ಎಲ್ಲರೂ ಚೆನ್ನಾಗಿದ್ದರು. ಈಗ ನಮ್ಮವರು ಕಂಗಾಲಾಗಿದ್ದಾರೆ. ಸರ್ಕಾರದ ಆಯಾಕಟ್ಟಿನ ಪ್ರಮುಖ ಹುದ್ದೆಗಳು ನಮ್ಮ ಸಮಾಜದವರಿಗೆ ಕೊಟ್ಟಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಸಮುದಾಯವರಿಗೆ ಮಣೆ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದರು.

 

ಬೆಂಗಳೂರಿ‌ನಲ್ಲಿ ವೀರಶೈವ ಮಹಾಸಭಾದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಭಾಷಣ ಮಾಡುವಾಗ ಸತ್ಯವನ್ನು ಹೇಳಿದ್ದೇ‌ನೆ. ಮುಖ್ಯವಾದ ಹುದ್ದೆಗಳನ್ನು ಬಹಳಷ್ಟು ಜನರಿಗೆ ಕೊಟ್ಟಿಲ್ಲ. ಇದರ ಬಗ್ಗೆ ನಾನು ಯಾವುದೇ ಮಂತ್ರಿಗಳ ಬಳಿ ಹೇಳಲು ಹೋಗಿಲ್ಲ. ಡಿಸಿಎಂ ತೆಗೆದುಕೊಂಡು ಏನು ಮಾಡಬೇಕು. ಆದರೆ ಸಿಎಂ ಆಗಬೇಕು. ಯಾವಾಗಲೂ ಸಿಎಂ ಹುದ್ದೆಗೆ ನಮ್ಮ ಪ್ರಸ್ತಾಪ ಇದ್ದೇ ಇರುತ್ತದೆ ಎಂದು ಹೇಳಿದರು.

Web Stories

Share This Article