ಬಾಗಲಕೋಟೆ: ಹೆಸ್ಕಾಂ ಅಧಿಕಾರಿ ಹಾಗೂ ಲೈನ್ ಮನ್ ಕರ್ತವ್ಯ ನಿರ್ಲಕ್ಷಕ್ಕೆ ಕಾರ್ಮಿಕ ಟ್ರಾನ್ಸ್ ಫಾರ್ಮರ್ ಕಂಬದ ಮೇಲೆಯೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ.
27 ವರ್ಷದ ಶರಣಯ್ಯ ಹಾದಿಮನಿ ಎಂಬ ಕಾರ್ಮಿಕನೇ ಮೃತ ದುರ್ದೈವಿ. ಇವರು ಮಂಗಳವಾರ ಮುಸ್ಸಂಜೆ ನಗರದ ಮಾಹಾಂತ ನಗರದ ಟ್ರಾನ್ಸ್ ಫಾರ್ಮರ್ ದುರಸ್ಥಿ ಕಾರ್ಯ ಮಾಡುತ್ತಿರುವಾಗ ದಿಢೀರ್ ಪ್ರವಹಿಸಿದ ವಿದ್ಯುತ್ ನಿಂದ ಶರಣಯ್ಯ ಸಾವೀಗೀಡಾಗಿದ್ದಾರೆ.
ಗುತ್ತಿಗೆ ಆಧಾರದ ಕಾರ್ಮಿಕ ಶರಣಯ್ಯ ಹಾದಿಮನಿ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮಹಾಂತನಗರದ ಟ್ರಾನ್ಸ್ ಫಾರ್ಮರ್ ದುರಸ್ಥಿಗಾಗಿ ಬಂದಿದ್ದರು. ಅಲ್ಲದೇ ವಿದ್ಯುತ್ ಕಡಿತಗೊಳಿದ್ದೇವೆ ಎಂಬ ಖಾತರಿಯ ಮೇರೆಗೆ ಟ್ರಾನ್ಸ್ ಫಾರ್ಮರ್ ಕಂಬ ಏರಿ, ದುರಸ್ಥಿ ಕಾರ್ಯ ಆರಂಭಿಸಿದ್ದಾರೆ. ಆದ್ರೆ ದುರಸ್ಥಿ ವೇಳೆ ಟ್ರಾನ್ಸ್ ಫಾರ್ಮರ್ ಗೆ ದಿಢೀರ್ ವಿದ್ಯುತ್ ಪ್ರವಹಿಸಿದ ಪರಿಣಾಮ ಶರಣಯ್ಯ ವಿದ್ಯುತ್ ಕಂಬದ ಮೇಲೆಯೇ ನೇತಾಡಿದ್ದಾರೆ. ವಿಷಯ ತಿಳಿದ ಕೂಡಲೇ ಸಂಬಂಧಿಕರು ಹಾಗೂ ಸ್ಥಳಿಯರು ಸೇರಿ ಮೃತನ ಶವ ಕೆಳಗಡೆ ಇಳಿಸಿದ್ದಾರೆ.
ಇಷ್ಟೆಲ್ಲಾ ಅನಾಹುತವಾದ್ರೂ ಈವರೆಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಶರಣಯ್ಯನ ಸಾವಿಗೆ ಹೆಸ್ಕಾಮ್ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.