ಬೆಂಗಳೂರು: ರಾಜ್ಯಕ್ಕೆ ಇಂದಿನಿಂದ ಹಿಂಗಾರು ಮಳೆ ಪ್ರವೇಶಿಸಿದ್ದು, ಕಳೆದ ಜೂನ್ನಲ್ಲಿ ಆರಂಭವಾಗಿದ್ದ ಮುಂಗಾರು ಮಳೆ ಸೆಪ್ಟೆಂಬರ್ ಗೆ ಕೊನೆಗೊಂಡಿದೆ. ಬುಧವಾರ ಮುಂಗಾರು ನಿರ್ಗಮನದ ಜೊತೆಗೆ ಹಿಂಗಾರು ಮಳೆಯ ಆಗಮನವಾಗಿದೆ.
ಈ ಬಾರಿ ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಈಗ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶಿಸಿದೆ. ಹಿಂಗಾರು ಮಳೆ ಆಗಮಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಆಗುತ್ತಿದೆ.
ಹಿಂಗಾರು ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳು, ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಮಳೆ ಆಗುವ ಸಾಧ್ಯತೆಯಿದೆ. ಅಲ್ಲದೆ ಚದುರಿದ ಮಳೆ ಆಗುವ ಲಕ್ಷಣಗಳಿವೆ.
ಬೆಂಗಳೂರಿನಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಕೂಡ ಆಗುತ್ತಿದೆ. ಇದೇ ರೀತಿಯ ಮೋಡ ಕವಿದ ವಾತಾವರಣ ಮತ್ತು ಮಳೆ ಇನ್ನೂ ಮೂರು ದಿನ ಮುಂದುವರಿಯಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.