– ನೀರನ್ನು ಕಾಪಾಡುವಂತೆ ಚಕ್ರವರ್ತಿ ಸೂಲಿಬೆಲೆ ಕರೆ
ಮಡಿಕೇರಿ: ಉತ್ತರ ಭಾರತದಲ್ಲಿ ಗಂಗಾ ನದಿ ಮಲೀನವಾಗುತ್ತಿರುವಂತೆ ದಕ್ಷಿಣದಲ್ಲಿ ಕಾವೇರಿ ಮಲೀನವಾಗುತ್ತಿದ್ದಾಳೆ. ಕಾವೇರಿಯನ್ನು ಸ್ವಚ್ಚಗೊಳಿಸಲು ಆಂದೋಲನಗಳು ನಡೆಯುತ್ತಿದ್ದು, ಇದೀಗ ಗಂಗಾ ನದಿಯಂತೆ ಕಾವೇರಿಗೂ ಮಹಾ ಆರತಿ ನಡೆಸಲಾಗುತ್ತಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಶುಕ್ರವಾರ ಕಾವೇರಿ ನದಿಗೆ ಸುತ್ತುರು ಶ್ರೀಗಳು ಗಣ್ಯ ವ್ಯಕ್ತಿಗಳು ನೂರನೇ ಮಹಾ ಆರತಿ ನೆರವೇರಿಸಿದರು. ಇತ್ತೀಚಿನ ದಿನಗಳಲ್ಲಿ ದಕ್ಷಿಣದಲ್ಲಿ ಕಾವೇರಿ ನದಿ ಕೂಡ ವರ್ಷದಿಂದ ವರ್ಷಕ್ಕೆ ಮಲೀನವಾಗುತ್ತಿದ್ದಾಳೆ. ಇದನ್ನೂ ಓದಿ: ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ
ಕುಶಾಲನಗರದ ಕಾವೇರಿಯನ್ನು ರಕ್ಷಿಸಿ ಆಂದೋಲನ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಇದರೊಂದಿಗೆ ಕಾವೇರಿ ಸ್ವಚ್ಚತಾ ಆಂದೋಲನ ಸಮಿತಿ ಕಳೆದ ಒಂಬತ್ತು ವರ್ಷಗಳಿಂದ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನದಿಗೆ ಮಹಾ ಆರತಿ ನಡೆಸುತ್ತಾ ಬಂದಿದ್ದು, ಶುಕ್ರವಾರ ನೂರನೇ ಮಹಾ ಆರತಿ ನಡೆಸಲಾಯಿತು.
ಕಾವೇರಿ ನದಿ ಹಬ್ಬ ನಡೆಸುವ ಮೂಲಕ ನೂರನೇ ಆರತಿಯನ್ನು ಮಾಡಲಾಯಿತು. ಸುತ್ತೂರು ಮಠದ ಸ್ವಾಮೀಜಿಗಳು ಸೇರಿದಂತೆ ಹಲವು ಪ್ರಮುಖರು ಆರತಿಯಲ್ಲಿ ಪಾಲ್ಗೊಂಡಿದ್ದರು. ಕಾವೇರಿ ಸ್ವಚ್ಚತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನೂರಾರು ವಿದ್ಯಾರ್ಥಿಗಳನ್ನು ಕಾವೇರಿ ಹಬ್ಬ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಕಾವೇರಿ ಸ್ವಚ್ಚತಾ ಕಾರ್ಯಕ್ರಮದ ರೂವಾರಿ ಯುವ ಬ್ರಿಗೇಡ್ನ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಾವೇರಿ ಹಬ್ಬದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ನೀರನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಿದರು. ಕಾವೇರಿಯ ತವರು ಕೊಡಗು ಜಿಲ್ಲೆಯ ಹಲವೆಡೆ ಕಾವೇರಿ ಕಲುಷಿತವಾಗುತ್ತಿದೆ. ಕುಶಾಲನಗರದಲ್ಲಿ ಕಲುಷಿತ ನೀರನ್ನು ನೇರವಾಗಿ ಟ್ಯಾಂಕರ್ ಮೂಲಕ ನದಿಗೆ ಬಿಡುವುದು ಕಂಡುಬರುತ್ತಿದೆ. ಇದನ್ನು ತಡೆಗಟ್ಟುಲು ಪ್ರತಿಯೊಬ್ಬರು ಮುಂದಾಗಬೇಕೆಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.