‘ಮನದ ಕಡಲು’ ಶೂಟಿಂಗ್ ವೇಳೆ 30 ಅಡಿ ಎತ್ತರದಿಂದ ಬಿದ್ದು ಲೈಟ್ಮ್ಯಾನ್ ಸಾವನ್ನಪ್ಪಿರುವ ಘಟನೆ ನೆಲಮಂಗಲದ ಅಡಕಮಾರನಹಳ್ಳಿ ಬಳಿ ನಡೆದಿದೆ. ಈ ಪ್ರಕರಣದ ಸಂಬಂಧವಾಗಿ ನಿರ್ದೇಶಕ ಯೋಗರಾಜ್ ಭಟ್ (Director Yogaraj Bhat) ಮೇಲೆ FIR ದಾಖಲಾಗಿದೆ. ಇದನ್ನೂ ಓದಿ:‘ಮಿಸ್ಟರ್ ಬಚ್ಚನ್’ ಸೋತಿದ್ದಕ್ಕೆ 4 ಕೋಟಿ ಸಂಭಾವನೆ ಹಿಂದಿರುಗಿಸಿದ ರವಿತೇಜ
ಕಳೆದ 15 ದಿನಗಳಿಂದ ಅಡಕಮಾರನಹಳ್ಳಿಯ ವಿ.ಆರ್.ಎಲ್. ಗೋಡೌನ್ನಲ್ಲಿ ಮನದ ಕಡಲು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸೆ.3ರಂದು ಸಂಜೆ 5.10ರ ವೇಳೆಗೆ ಲೈಟ್ ಬಿಚ್ಚುವಾಗ 30 ಅಡಿ ಎತ್ತರದಿಂದ ಮೋಹನ್ ಕುಮಾರ್ ಬಿದ್ದಿದ್ದರು. ತಲೆಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆ ಕಳೆದ 3 ದಿನಗಳಿಂದ ಗಾಯಾಳು ಮೋಹನ್ಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಗುರುವಾರ (ಸೆ.5) ಸಾವನ್ನಪ್ಪಿದ್ದಾರೆ.
ಚಿತ್ರೀಕರಣದ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ ಆರೋಪದಡಿ ನಿರ್ದೇಶಕ ಯೋಗರಾಜ್ ಭಟ್, ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ಮೇಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.