ಚಿಕ್ಕಬಳ್ಳಾಪುರ: ಇತ್ತ ಮಂಡ್ಯ ಸಾವಿನ ಬಸ್ ದುರಂತ ರಾಜ್ಯದ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದರೆ, ಅತ್ತ ಇಡೀ ರಾಜ್ಯಾದ್ಯಾಂತ ಇಂತಹ ಅದೆಷ್ಟೋ ಕಡೆಗಳಲ್ಲಿ ಖಾಸಗಿ ಬಸ್ಗಳಲ್ಲಿ ಸಾರ್ವಜನಿಕರು ಸಾವಿನ ಜೊತೆ ಸವಾರಿ ನಡೆಸುತ್ತಿದ್ದಾರೆ.
ಇದಕ್ಕೆ ಪ್ರಮುಖ ಸಾಕ್ಷಿ ಎಂಬಂತೆ ರಾಜ್ಯ ರಾಜಧಾನಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಖಾಸಗಿ ಬಸ್ಗಳು ಸಾವಿನ ಬಸ್ಗಳಾಗಿ ಸಂಚರಿಸುತ್ತಿರುವ ದೃಶ್ಯ ಎಲ್ಲಡೆ ಸಾಮಾನ್ಯ ಎಂಬಂತಾಗಿದೆ. ಜಿಲ್ಲೆಯ ಗಡಿಭಾಗದ ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ ಯಾರ ಭಯವೂ ಇಲ್ಲದೆ ಖಾಸಗಿ ಬಸ್ಗಳು ಕಾನೂನುಗಳನ್ನು ಉಲ್ಲಂಘಿಸಿ ರಾಜರೋಷವಾಗಿ ಸಂಚರಿಸುತ್ತಿವೆ.
ಚಿಂತಾಮಣಿ-ಚೇಳೂರು, ಚಿಂತಾಮಣಿ-ಕೆಂಚಾರ್ಲಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್ಗಳ ಸಂಚಾರ ವಿರಳವಾಗಿರುವುದರಿಂದ ಖಾಸಗಿ ಬಸ್ಗಳು ಎಗ್ಗಿಲ್ಲದೇ ಸಂಚರಿಸುತ್ತಿವೆ. ಕೇವಲ ಖಾಸಗಿ ಬಸ್ನ ಓಳಭಾಗದಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿರೋದು ಮಾತ್ರವಲ್ಲದೆ ಸಾವಿನ ಸವಾರಿಗೆ ಸ್ಪಷ್ಟ ಸಾಕ್ಷಿ ಎಂಬಂತೆ ಬಸ್ನ ಟಾಪ್ ಮೇಲೆ ಕೂತು ಸಾರ್ವಜನಿಕರು ಪ್ರಯಾಣ ಮಾಡುತ್ತಿದ್ದಾರೆ. ಪ್ರತಿ ದಿನವೂ ಇದೇ ರೀತಿ ಸಾರ್ವಜನಿಕರು ಬಸ್ನ ಟಾಪ್ ಹಾಗೂ ಬಸ್ನ ಹಿಂಭಾಗದ ಮೆಟ್ಟಿಲುಗಳು ಸೇರಿದಂತೆ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ ಮಾಡುತ್ತಿದ್ದರೂ ಖಾಸಗಿ ಬಸ್ಗಳಿಗೆ ಕಡಿವಾಣ ಹಾಕುವ ಕೆಲಸ ಆರ್ಟಿಓ ಇಲಾಖೆ ಮಾಡಿಲ್ಲ.
ಪ್ರತಿದಿನವೂ ರಾಜ್ಯದ ನಾನಾ ಕಡೆಯೂ ಇಂತಹ ಅದೆಷ್ಟೂ ಸಾವಿನ ಬಸ್ ಗಳು ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ಆಡುತ್ತಾ ಸವಾರಿ ಮಾಡುತ್ತಿವೆ. ಹೀಗಾಗಿ ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv