ಹೈದರಾಬಾದ್: ಅದಿರು ಪೂರೈಕೆಯಲ್ಲಿ ಸ್ಥಿರತೆಯನ್ನು ಸಮರ್ಥವಾಗಿ ಕಾಪಾಡಿಕೊಳ್ಳಬೇಕು ಹಾಗೂ ಉಕ್ಕು ತಯಾರಿಕಾ ಘಟಕಗಳಿಗೆ ಕಬ್ಬಿಣದ ಅದಿರು ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ (NMDC) ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೈದರಾಬಾದ್ನಲ್ಲಿ (Hyderabad) ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬೃಹತ್ ಉಕ್ಕು ತಯಾರಿಕಾ ಘಟಕಗಳಿಗೆ ಅದಿರು ಪೂರೈಕೆ ಮಾಡುವಂತೆಯೇ ಮಧ್ಯಮ, ಸಣ್ಣ, ಅತಿ ಸಣ್ಣ ಉಕ್ಕು ತಯಾರಿಕಾ ಘಟಕಗಳಿಗೂ ಅದಿರು ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ನನ್ನ ಭೇಟಿಗೆ ಬರುವವರು ಕಡ್ಡಾಯವಾಗಿ ಆಧಾರ್ ತನ್ನಿ: ಕಂಗನಾ ರಣಾವತ್!
ಅದಿರು ಪೂರೈಕೆಯಲ್ಲಿ ಸಮತೋಲನ:
ಎಲ್ಲಾ ಘಟಕಗಳಿಗೆ ಅದಿರು ಪೂರೈಕೆಯಲ್ಲಿ ಸಮತೋಲನ, ಸ್ಥಿರತೆ ಕಾಪಾಡಿಕೊಂಡರೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಬಹುದು. ಆ ಮೂಲಕ ಉಕ್ಕು ವಲಯದಿಂದ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ದೊಡ್ಡ ಕೊಡುಗೆ ನೀಡಬಹುದು. ಇದುವೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕನಸು ಎಂದು ಅಧಿಕಾರಿಗಳಿಗೆ ಹೇಳಿದರು. ಇದನ್ನೂ ಓದಿ: ಕಾವೇರಿ ವಿಚಾರವಾಗಿ ಕಾನೂನು ತಜ್ಞರೊಂದಿಗೆ ಚರ್ಚೆ: ಡಿಕೆಶಿ
2024ಕ್ಕೆ ವಾರ್ಷಿಕ 100 ದಶಲಕ್ಷ ಟನ್ ಕಬ್ಬಿಣದ ಅದಿರು ಹೊರ ತೆಗೆಯುವ ನಿಗಮದ ಗುರಿಯ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಗಣಿಗಾರಿಕೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡುವ ಮೂಲಕ ಅದಿರು ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಿ. ವಾರ್ಷಿಕ 300 ದಶಲಕ್ಷ ಟನ್ ಉಕ್ಕು ತಯಾರಿಸುವ ಗುರಿಯನ್ನು ಪ್ರಧಾನಿಗಳು ನೀಡಿದ್ದಾರೆ. ಅದನ್ನು ದುಪ್ಪಟ್ಟು ಮಾಡುವ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು. ಇದನ್ನೂ ಓದಿ: ಬರ ಪರಿಹಾರ ಬಿಡುಗಡೆ ವಿಚಾರ – ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ
ಹೆಚ್ಚು ಪ್ರಮಾಣದಲ್ಲಿ ಗಣಿಗಾರಿಕೆಯನ್ನು ಮಾಡಬೇಕು. ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಅರಣ್ಯ ಬೆಳೆಸಬೇಕು. ಗಣಿಗಾರಿಕೆ, ಪೂರೈಕೆ ಹಾಗೂ ಉಕ್ಕು ತಯಾರಿಕೆಯ ಸರಪಳಿಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದರು. ಇದೇ ವೇಳೆ ಕಬ್ಬಿಣ, ಚಿನ್ನ, ವಜ್ರದ ಗಣಿಗಾರಿಕೆ ನಡೆಸುತ್ತಿರುವ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ ಸಾಧನೆಯ ಪಕ್ಷಿನೋಟ ವೀಕ್ಷಿಸಿದ ಸಚಿವರು, ಕೇಂದ್ರ ಸರ್ಕಾರದಿಂದ ಎಲ್ಲಾ ಸಹಕಾರವೂ ಇರುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ನಿರೂಪಕಿ ಅಪರ್ಣಾ
ಪ್ರಧಾನಿಗಳ ಮಾರ್ಗದರ್ಶನದೊಂದಿಗೆ ಅವರೇ ನಿಗದಿ ಮಾಡಿರುವ ಗುರಿಯನ್ನು ಮುಟ್ಟಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು. ನಿಗಮದ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಅಮಿತ್ವ ಮುಖರ್ಜಿ ಅವರು ನಿಗಮದ ಕಾರ್ಯ ಚಟುವಟಿಕೆ ಹಾಗೂ ಇನ್ನಿತರೆ ವಿವರಗಳ ಬಗ್ಗೆ ಸಚಿವರಿಗೆ ಪ್ರಾತ್ಯಕ್ಷಿಕೆ ನೀಡಿದರು. ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು ಸೇರಿ ನಿಗಮದ ವಿವಿಧ ನಿರ್ದೇಶಕರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ನೀಡಿ, ಮತ್ತೊಬ್ಬ ಹಿಂದುಳಿದ ನಾಯಕನನ್ನು ಸಿಎಂ ಮಾಡಲಿ: ವಿಜಯೇಂದ್ರ ಒತ್ತಾಯ