ಬೆಳಗಾವಿ: ಸರ್ಕಾರ ಓಲಾ ಹಾಗೂ ಕ್ಯಾಬ್ ಡ್ರೈವರ್ ಹಿತ ಕಾಯುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ ಎಂದು ನಮ್ಮ ಚಾಲಕರ ಟ್ರೆಂಡ್ ಯೂನಿಯನ್ನ ಉಪಾಧ್ಯಕ್ಷ ಕೆ. ಸೋಮಶೇಖರ ಹೇಳಿದರು.
ಸೋಮವಾರ ಸಾಹಿತ್ಯ ಭವನದಲ್ಲಿ ನಮ್ಮ ಚಾಲಕರ ಟ್ರೆಂಡ್ ಯೂನಿಯನ್ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸಾಕಷ್ಟು ಜನ ಡ್ರೈವರ್ ಗಳು ನಮ್ಮ ಸೌಲಭ್ಯವನ್ನು ಪಡೆಯಲು ಹೋರಾಟ ಮಾಡಬೇಕಿದೆ. ಮುಂಬೈ ಮಾದರಿಯಲ್ಲಿ ರಾಜ್ಯದಲ್ಲಿಯೂ ಕ್ಯಾಬ್ ಗಳಿಗೆ ದರ ನಿಗದಿ ಮಾಡಿದ್ದಾರೆ. ಆದರೆ ಅದನ್ನು ಕಾರ್ಯ ರೂಪಕಕ್ಕೆ ತರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓಲಾ ಕ್ಯಾಬ್ ಚಾಲಕರ ಸಿಬ್ಬಂದಿ ಕೊರತೆಯಿದೆ ಎಂದು ಕೆಲವರು ಸುದ್ದಿ ಹರಡಿಸುತ್ತಿದ್ದಾರೆ. ಆ ರೀತಿಯ ಕೊರತೆ ನಮ್ಮಲ್ಲಿ ಇಲ್ಲ. ಹೊರ ರಾಜ್ಯದಿಂದ ಬಂಡವಾಳ ಶಾಹಿಗಳು ಬಂದು ರಾಜಭಾರ ಮಾಡುತ್ತಾರೆ. ಆದರೆ ನಮ್ಮವರಿಗೆ ಸರ್ಕಾರ ರಕ್ಷಣೆ ನೀಡುತ್ತಿಲ್ಲ ಎಂದರು.
ಆಲ್ ಇಂಡಿಯಾ ಅನುಮತಿಯನ್ನು ಕ್ಯಾಬ್ ಡ್ರೈವರ್ ಪಡೆಯಬೇಕು. ಸರ್ಕಾರವೇ ಕ್ಯಾಬ್ಗಳಿಗೆ ದರ ನಿಗದಿಪಡಿಸಿ ಅವುಗಳಿಗೆ ಮೀಟರ್ ಅಳವಡಿಕೆ ಮಾಡಬೇಕು ಎಂದಾಗ ಮಾತ್ರ ಕ್ಯಾಬ್ ಡ್ರೈವರ್ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದರೆ ಸರ್ಕಾರ ಮಾತ್ರ ಈ ಕುರಿತು ಚಿಂತನೆ ನಡೆಸುತ್ತಿಲ್ಲ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಾಲಕರ ದಿನಾಚಾರಣೆ ಎಂದು ನಿಗದಿ ಮಾಡಬೇಕು. ಪ್ರತಿ ವರ್ಷ ಹತ್ತು ಚಾಲಕರಿಗೆ ತಲಾ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಬೇಕೆಂದು ನಿರ್ಣಯ ತೆಗೆದುಕೊಂಡಿದ್ದರೂ ಅದನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ದಿವಂಗತ ಚಿತ್ರ ನಟ ಶಂಕರ್ ನಾಗ್ ಜನ್ಮ ದಿನಾಚರಣೆಯಂದೆ ಚಾಲಕರ ದಿನಾಚರಣೆ ಆಚರಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಈ ಕುರಿತು ಡಿಸಿಎಂ ಅಶ್ವಥ ನಾರಾಯಣ ಅವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು. ಈ ವೇಳೆ ಪದ್ಮರಾಜ್ ಜೈನ್, ಉಮೇಶ, ಶಿವಾನಂದ, ರಮೇಶ, ನಾಗರಾಜ್ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.