ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗಡೆ ನಾಪತ್ತೆಯಾಗಿದ್ದು, ಇದೀಗ ಅವರ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಸಿಬ್ಬಂದಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ನಗರದ ಮಲ್ಲೇಶ್ವರಂ ಕಾಫಿ ಡೇಯ ಮಹಿಳಾ ಸಿಬ್ಬಂದಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಾಮಾನ್ಯವಾಗಿ ಸಿದ್ಧಾರ್ಥ್ ಅವರು ಒಳ್ಳೆಯ ವ್ಯಕ್ತಿತ್ವದವರು. ಅವರು ನಮ್ಮ ಜೊತೆ ಚೆನ್ನಾಗಿದ್ದರು. ಅಂಥವರು ಇದೀಗ ಕಾಣೆಯಾಗಿದ್ದಾರೆ ಎಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರು ಆದಷ್ಟು ಬೇಗ ಅವರು ನಮ್ಮ ಕಣ್ಣ ಮುಂದೆ ಬರಲಿ ಎಂದು ನಾವು ದೇವರಲ್ಲಿ ಬೇಡಿಕೊಳ್ಳುವುದಾಗಿ ತಿಳಿಸಿದರು.
ತುಂಬಾ ಸರಳ ವ್ಯಕ್ತಿಯಾಗಿದ್ದಾರೆ. ತನ್ನ ಸಿಬ್ಬಂದಿಯನ್ನು ಅವರು ತುಂಬಾನೇ ಚೆನ್ನಾಗಿಯೇ ಉಪಚರಿಸುತ್ತಿದ್ದರು. ಆದರೆ ಇದೀಗ ಅವರು ದಿಢೀರ್ ನಾಪತ್ತೆಯಾಗಿರುವುದು ನಮಗೆಲ್ಲ ಬೇಸರ ತಂದಿದೆ. ಹೀಗಾಗಿ ನಮಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವ ಸುದ್ದಿ ನಮಗೆ ನಮ್ಮ ವಾಟ್ಸಪ್ ಗ್ರೂಪಿನಿಂದಾಗಿ ಬೆಳಗ್ಗೆ ಗೊತ್ತಾಯಿತು. ಈ ವಿಚಾರ ತಿಳಿದ ತಕ್ಷಣವೇ ನನಗೆ ತುಂಬಾನೆ ದುಃಖವಾಯಿತು. ಯಾಕೆಂದರೆ ಅವರು ತುಂಬಾನೆ ಚೆನ್ನಾಗಿ ಸಿಬ್ಬಂದಿಯನ್ನು ನೋಡಿಕೊಳ್ಳುತ್ತಾರೆ ಹಾಗೆಯೇ ಮಾತನಾಡಿಸುತ್ತಾರೆ. ಹೀಗಾಗಿ ಅವರು ಆದಷ್ಟು ಬೇಗ ಅವರು ಸುರಕ್ಷಿತವಾಗಿ ಬರಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ.
ಅವರು ಹೆಣ್ಣು- ಗಂಡು ಎಂಬ ಬೇಧ-ಭಾವವಿಲ್ಲದೆ ಎಲ್ಲರಿಗೂ ಕಾಫಿ ಡೇಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಚಿಕ್ಕಮಗಳೂರಲ್ಲಿ ಅವರ ಸಂಸ್ಥೆಯೊಂದಿದೆ. ಅಲ್ಲಿ ನಮಗೆ ತರಬೇತಿ ಕೊಡುತ್ತಾರೆ ಎಂದರು.
ತರಬೇತಿ ಪಡೆದು ಬಂದು ಸುಮಾರು 6 ತಿಂಗಳು ಆಯ್ತು. ಮಲ್ಲೇಶ್ವರಂನಲ್ಲಿರುವ ಇನ್ನೊಂದು ಕಾಫಿ ಡೇಗೆ ಒಂದು ಬಾರಿ ಅವರು ಬಂದಿದ್ದರು. ತುಂಬಾ ಸರಳವಾಗಿರುವ ಅವರು ನಗುನಗುತ್ತಾ ಸಿಬ್ಬಂದಿಯನ್ನು ಮಾತನಾಡಿಸಿದ್ದರು. ದೊಡ್ಡ ವ್ಯಕ್ತಿಯೆಂಬ ಅಹಂಕಾರ ಅವರಲ್ಲಿ ಇಲ್ಲ. ಹೀಗಾಗಿ ಅವರನ್ನು ನೋಡಿದ್ದರೆ ನಮಗೆ ಪಾಸಿಟಿವ್ ಥಿಂಕಿಂಗ್ ಬರುತ್ತದೆ ಎಂದು ತಮ್ಮ ಬಾಸ್ ಬಗ್ಗೆ ಹೇಳಿಕೊಂಡರು.
https://www.youtube.com/watch?v=UN-UV3nFFwo