ಧಾರವಾಡ: ಸರ್ಕಾರದ ಕೆಲಸ ಸರ್ಕಾರದಲ್ಲಿ ನಡೆಯುತ್ತಿರುತ್ತೆ, ಪಕ್ಷದ ಕೆಲಸವನ್ನು ಪಕ್ಷ ಮಾಡಬೇಕು ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ಧಾರವಾಡದಲ್ಲಿ ನಡೆದ ಲೋಕಸಭೆ ಚುನಾವಣೆ ಸೋಲಿನ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಸುಮ್ಮನೆ ಕಾಲಹರಣ ಮಾಡುವುದು ಸರಿಯಲ್ಲ. ಪಕ್ಷದ ಕೆಲಸವನ್ನು ಪಕ್ಷ ಮಾಡಬೇಕು, ಅಂದಾಗ ಮಾತ್ರ ನಾವು ಪಕ್ಷ ನಡೆಸಲು ಸಾಧ್ಯ ಎಂದು ಹೇಳಿದರು.
ಸಿಎಂ ವಿಶ್ವಾಸಮತ ಸಾಬೀತು ಮಾಡುವಾಗಲೇ ನಾವು ಧಾರವಾಡದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆ. ನಾವೆಲ್ಲ ಸರ್ಕಾರಕ್ಕೆ ವೋಟರ್ ಅಲ್ಲ. ಇಂದು ನಾವು ಸರ್ಕಾರದ ಬಗ್ಗೆ ಚರ್ಚೆ ನಡೆದಾಗಲೇ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆ ಎಂದು ಮಾತನಾಡಿದರು.
ನಾನು ಸೇರಿದಂತೆ ಈ ಸಭೆಯಲ್ಲಿರುವ ನಾಯಕರು ಯಾರೂ ಸರ್ಕಾರಕ್ಕೆ ವೋಟರ್ ಅಲ್ಲ, ಕೇವಲ ಪ್ರೇಕ್ಷಕರು ಮಾತ್ರ ಎಂದರು. ಅಲ್ಲದೆ ನಾವು ಏನೂ ಮಾಡಲು ಆಗುವುದಿಲ್ಲ. ಅದೆಲ್ಲ ನಡೆಯುತ್ತಿರುತ್ತದೆ. ಹೀಗಾಗಿ ಸಮಯ ವ್ಯರ್ಥ ಮಾಡಬಾರದು ಎಂದು ನಾವು ಗಂಭೀರವಾಗಿ ಇಲ್ಲಿ ಸಭೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.