ಬೆಳಗಾವಿ: ಜಿಲ್ಲೆಯಲ್ಲಿ ಕಳೆದ 18 ದಿನಗಳಿಂದ ನಾಪತ್ತೆ ಆಗಿದ್ದ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿರುವ 22 ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ನಗರದ ಹಿಂಡಲಗಾ ರಸ್ತೆಯ ವನಿತಾ ವಿದ್ಯಾಲಯ ಬಳಿಯ ಡಬಲ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಚಿರತೆ ಪತ್ತೆಯಾಗಿದೆ. ಬಸ್ ಚಾಲಕರೊಬ್ಬರು ಚಿರತೆ ಓಡಾಡುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇತ್ತ ಚಿರತೆ ಪತ್ತೆಯಾದ ಹಿನ್ನೆಲೆ ಶಾಲಾ ಮಕ್ಕಳು ಹಾಗೂ ಪೋಷಕರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ಚಿರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯ ವ್ಯಾಪ್ತಿಯಲ್ಲಿನ 22 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ತಿಳಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವ ಆಚರಿಸಲು ಸಿದ್ಧತೆ
ನಗರದ ಜಾಧವ್ ನಗರದಲ್ಲಿ ಕಳೆದ ಆಗಸ್ಟ್ 5 ರಂದು ಚಿರತೆ ಪತ್ತೆಯಾಗಿತ್ತು. ಈ ವೇಳೆ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿ ಬೆಳಗಾವಿ ಗಾಲ್ಫ್ ಮೈದಾನದೊಳಗೆ ಹೋಗಿತ್ತು. ಇದಾದ ಬಳಿಕ ಕಳೆದ 18 ದಿನಗಳಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದೆ. ಇತ್ತ ಕಳೆದ 18 ದಿನಗಳಿಂದ ಚಿರತೆ ನಗರ ಪ್ರದೇಶದಲ್ಲಿದ್ದರೂ ಚಿರತೆ ಹಿಡಿಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಟಾಚಾರದ ಚಿರತೆ ಪತ್ತೆ ಕಾರ್ಯ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ರಾತ್ರಿ ಹೊತ್ತಿನಲ್ಲಿ ಗಾಲ್ಫ್ ಮೈದಾನದಿಂದ ಚಿರತೆ ಹೊರಗೆ ಬರುತ್ತಿದೆ. ಇದರಿಂದ ಬೆಳಗಾವಿ ಕ್ಯಾಂಪ್, ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: 200 ಸಿಬ್ಬಂದಿ ನಿಯೋಜನೆ; ಇನ್ನೂ ಪತ್ತೆಯಾಗಿಲ್ಲ ಚಿರತೆ!