ಹಾಸನ: ಹಲವು ದಿನಗಳಿಂದ ರೈತರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯೊಂದು ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಸೆರೆಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಎನ್. ಸಿಂಗೇನಹಳ್ಳಿ ಬಳಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಪ್ರಾಣ ಭಯದೊಂದಿಗೆ ಜೀವನ ಸಾಗಿಸುವಂತಾಗಿತ್ತು. ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ ಹಿಡಿಯಲು ಒಂದು ತಿಂಗಳ ಹಿಂದೆಯೇ ಅರಣ್ಯ ಇಲಾಖೆ ಬೋನ್ ಅಳವಡಿಸಿತ್ತು.
ಇದೀಗ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ 4 ವರ್ಷದ ಹೆಣ್ಣು ಚಿರತೆಯೊಂದು ಸೆರೆಯಾಗಿದ್ದು, ಇದರ ಜೊತೆಗೆ ಇನ್ನಷ್ಟು ಚಿರತೆಗಳಿದ್ದು ಅವುಗಳನ್ನು ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸದ್ಯ ಕೆಲ ತಿಂಗಳಿಂದ ಜನ ಜಾನುವಾರುಗಳಲ್ಲಿ ಸಹ ಭೀತಿ ಹುಟ್ಟಿಸಿದ್ದ ಚಿರತೆ ಬೋನ್ ಗೆ ಬಿದ್ದಿರುವುದರಿಂದ ಸ್ಥಳೀಯರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.