ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ 1,800ಕ್ಕೂ ಹೆಚ್ಚು ವಿವಿಧ ಜಾತಿಯ ಹಾಗೂ ಅಪರೂಪದ ತಳಿಯ ಸಸ್ಯಗಳನ್ನು ನೆಡಲು ಮುಂದಾಗಿದ್ದಕ್ಕೆ ಹಿರಿಯ ನಟಿ ಸುಮಲತಾ ಅಂಬರೀಷ್ ಟ್ವಿಟ್ಟರಿನಲ್ಲಿ ಹೊಗಳಿದ್ದಾರೆ.
ನಾನು ಒಬ್ಬ ಪ್ರಾಣಿ ಪ್ರಿಯನಾಗಿ 13 ವರ್ಷದಿಂದ ಅಪರೂಪದ ಪ್ರಾಣಿ-ಪಕ್ಷಿಗಳನ್ನು ಸಾಕುತ್ತಿದ್ದೇನೆ. ಆದರೆ ಈ ವರ್ಷ ನಾನು ನನ್ನ ಫಾರ್ಮ್ ಹೌಸನ್ನು ಹಸಿರು ಮಾಡಲು ನಿರ್ಧರಿಸಿದ್ದೇನೆ. ನಾನು 1,800ಕ್ಕೂ ಹೆಚ್ಚು ವಿವಿಧ ಜಾತಿಯ ಹಾಗೂ ಅಪರೂಪದ ತಳಿಯ ಸಸಿಗಳನ್ನು ಖರೀದಿ ಮಾಡಿದ್ದೇನೆ. ನನ್ನ ಸ್ನೇಹಿತರು ಕೂಡ ಈ ಸಸಿ ನೆಡಲು ನನಗೆ ಸಹಾಯ ಮಾಡುತ್ತಿದ್ದಾರೆ ಎಂದು ದರ್ಶನ್ ಹೇಳಿದ್ದಾರೆ.
ಪರಿಸರ ಉಳಿಸಲು ನನ್ನ ಕಡೆಯಿಂದ ಇದು ಒಂದು ಕೊಡುಗೆ ಆಗಿದೆ. ಅರಣ್ಯ ಇಲಾಖೆ ನನನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡುವ ಮೊದಲೇ ನಾನು ಈ ಮಹತ್ವದ ಕಾರ್ಯ ಕೈಕೊಂಡಿದ್ದೆ ಎಂದು ದರ್ಶನ್ ತಿಳಿಸಿದ್ದಾರೆ.
ದರ್ಶನ್ ಅವರ ಈ ನಿರ್ಧಾರಕ್ಕೆ ಹಿರಿಯ ನಟಿ ಸುಮಲತಾ ಅಂಬರೀಷ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರಿನಲ್ಲಿ, “ದರ್ಶನ್ ತಮ್ಮ ಸಾವಿರಾರು ಅಭಿಮಾನಿಗಳಿಗೆ ಬಾಸ್ ಆಗಲು ಈ ಒಂದು ಉದಾಹರಣೆ ಸಾಕು” ಎಂದು ಸುಮಲತಾ ಅಂಬರೀಷ್ ಟ್ವೀಟ್ ಮಾಡಿದ್ದಾರೆ.
ದಿನನಿತ್ಯದ ಜೀವನದಲ್ಲಿ ದರ್ಶನ್ಗೆ ಪ್ರಾಣಿ- ಪಕ್ಷಿಗಳು ಅವಿಭಾಜ್ಯ ಅಂಗ. ದರ್ಶನ್ ಲಕ್ಷಾಂತರ ಖರ್ಚು ಮಾಡಿ ಮೈಸೂರು ಮೃಗಾಲಯದಲ್ಲಿ ಹುಲಿ ಆನೆಯನ್ನ ದತ್ತು ಪಡೆದು ಸಲಹುತ್ತಿದ್ದಾರೆ. ವರ್ಷಕ್ಕೆ ಒಮ್ಮೆಯಾದ್ರೂ ಕಾಡಿಗೆ ಪ್ರವಾಸ ಬೆಳೆಸಿ ಪೃಕೃತಿ ಮಡಿಲಲ್ಲಿ ಆಶ್ರಯಿಸುತ್ತಾರೆ. ಆದ್ದರಿಂದ ಈಗ ದರ್ಶನ್ ಕೂಡ ಕಾಡು ರಕ್ಷಣಾ ಜಾಗೃತಿ ಅಭಿಯಾನಕ್ಕೆ ಮನಃಪೂರ್ತಿ ಕೈಜೋಡಿಸಿದ್ದಾರೆ.
ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸಿದ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಂಯದ ಬ್ರಾಂಡ್ ಅಂಬಾಸಿಡರ್ ಆಗಿ ದರ್ಶನ್ ಅವರನ್ನು ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು.