ಚಿಕ್ಕಬಳ್ಳಾಪುರ:“ಸುಧಾಕರ್ ಹಠಾವೋ ಚಿಕ್ಕಬಳ್ಳಾಪುರ ಬಚಾವೋ” ಅಂತ ಘೋಷಣೆ ಕೂಗುವ ಮೂಲಕ ರಾತ್ರೋ ರಾತ್ರಿ ಉಪನ್ಯಾಸಕರೊಬ್ಬರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಶಾಸಕರ ಸ್ವಗ್ರಾಮದವರೇ ಆಗಿರುವ ಹಾಗೂ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಪೇರೇಸಂದ್ರ ಗ್ರಾಮದ ಪ್ರದೀಪ್, ಶಾಸಕ ಡಾ.ಕೆ. ಸುಧಾಕರ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕಳೆದ 15 ದಿನಗಳಿಂದ ಉಪನ್ಯಾಸಕ ಪ್ರದೀಪ್ ಸುಧಾಕರ್ ವಿರುದ್ಧ ದನಿ ಎತ್ತಿದ್ದಾರೆ. ಶಾಸಕರ ವಿರುದ್ಧ ಸೆಲ್ಫಿ ವಿಡಿಯೋ ಮಾಡಿ ನೀವು ಮಾಡ್ತಿರೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದು, ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೀಗಾಗಿ ಶಾಸಕರ ಬೆಂಬಲಿಗ ಹಾಗೂ ನಗರಸಭಾ ಸದಸ್ಯ ಗಜೇಂದ್ರ ಎಂಬವರು ಶಾಸಕ ಸುಧಾಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ ಅಂತ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರದೀಪ್ ವಿರುದ್ಧ ಐಪಿಸಿ ಸೆಕ್ಷೆನ್ 107 ರಡಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಪ್ರದೀಪ್ ರನ್ನ ಬಂಧಿಸಿದ್ದ ಪೊಲೀಸರು ಮಂಗಳವಾರದಂದು ತಾಲೂಕು ದಂಡಾಧಿಕಾರಿಗಳ ವಿರುದ್ಧ ಹಾಜರುಪಡಿಸಿದ್ರು. ಮುಂದೆ ಈ ರೀತಿ ಮಾಡದಂತೆ ತಾಲೂಕು ದಂಡಾಧಿಕಾರಿ ನರಸಿಂಹಮೂರ್ತಿ ಪ್ರದೀಪ್ ಬಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.
ಆದ್ರೆ ಇಷ್ಟು ದಿನ ಶಾಸಕ ಸುಧಾಕರ್ ವಿರುದ್ಧ ದನಿ ಎತ್ತದವರೇ ಇಲ್ಲದ ಕ್ಷೇತ್ರದಲ್ಲಿ ಶಾಸಕರ ವಿರುದ್ಧ ತಿರುಗಿಬಿದ್ದು ಹೊರಬರುತ್ತಿದ್ದಂತೆ ಪ್ರದೀಪ್ ಗೆ ಪಕ್ಷಾತೀತವಾಗಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಕಾಂಗ್ರೆಸ್ ಶಾಸಕ ಸುಧಾಕರ್ ವಿರುದ್ಧ ಜೆಡಿಎಸ್, ಬಿಜೆಪಿ, ಸೇರಿದಂತೆ ಪಕ್ಷೇತರರವಾಗಿರುವ ರಾಜಕೀಯ ಮುಖಂಡರು ಬೆಂಬಲಕ್ಕೆ ನಿಂತಿದ್ದರೆ, ಮತ್ತೊಂದೆಡೆ ಪ್ರದೀಪ್ ಗೆ ಹೂವಿನ ಹಾರ, ಜೈಕಾರ ಹಾಕಿ ನಗರದ ಪ್ರಮುಖ ರಸ್ತೆಯಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದ್ರು.