ತುಮಕೂರು: ಉಪನ್ಯಾಸಕಿಯೊಬ್ಬರು ಮೇಕಪ್ ಮಾಡಿಕೊಂಡು ಕಾಲೇಜಿಗೆ ಬಂದರೆ ಇಲ್ಲಿನ ಪ್ರಾಂಶುಪಾಲರಿಗೆ ಆಗಲ್ವಂತೆ. ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡ್ರೂ, ಪರಿಚಯದವರ ಬಳಿ ಬೈಕ್ನಲ್ಲಿ ಡ್ರಾಪ್ ತೆಗೆದುಕೊಂಡರೂ ಕೆಟ್ಟದಾಗಿ ಕಮೆಂಟ್ ಮಾಡ್ತಾರಂತೆ. ಇದ್ರಿಂದ ರೋಸಿಹೋದ ಉಪನ್ಯಾಸಕಿ ಈಗ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ತುಮಕೂರಿನ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ರಾಜ್ ವಿರುದ್ಧ ಈ ರೀತಿಯ ಆರೋಪಗಳು ಕೇಳಿ ಬಂದಿವೆ. ಕನ್ನಡ ಉಪನ್ಯಾಸಕಿ ಜ್ಯೋತಿ (ಹೆಸರು ಬದಲಾಯಿಸಲಾಗಿದೆ)ಅವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಎದುರೇ ಡ್ರೆಸ್, ಮೈಮಾಟದ ಬಗ್ಗೆ ಲಘುವಾಗಿ ಮಾತನಾಡಿ ಅವಮಾನಿಸಿದ್ದಾರೆ ಅಲ್ಲದೆ ಲಿಪ್ಸ್ಟಿಕ್ ಹಚ್ಚಿ, ಮೇಕಪ್ ಮಾಡಿಕೊಂಡು ಕಾಲೇಜಿಗೆ ಹೋದರೆ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ ಎಂದು ಜ್ಯೋತಿ ಆರೋಪಿಸುತ್ತಾರೆ.
ಪ್ರಾಂಶುಪಾಲ ಪ್ರವೀಣ್ ರಾಜ್ ವಿರುದ್ಧ ಜ್ಯೋತಿ ಈಗ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವಮಾನ, ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಅಂತಾ ದೂರು ನೀಡಿದ್ದಾರೆ. ಆದರೆ ಪೊಲೀಸರು ಎನ್ಸಿಆರ್ (Non-Cognizable Report) ಮಾಡಿ ಕೈ ತೊಳೆದುಕೊಂಡಿದ್ದಾರೆ. ದೂರು ನೀಡಿದ್ದಕ್ಕೆ ಕಾಲೇಜಿನ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.
ಉಪನ್ಯಾಸಕಿ ಜ್ಯೋತಿ ಮಾಡಿರುವ ಆರೋಪದ ಬಗ್ಗೆ ಪ್ರಾಂಶುಪಾಲ ಪ್ರವೀಣ್ ರಾಜ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಸುದ್ದಿ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ ಅಂತಾ ಮಾಧ್ಯಮಗಳಿಗೂ ಬೆದರಿಸಿದ್ದಾರೆ. ಯಾರದ್ದು ಸತ್ಯ ಯಾರದ್ದು ಸುಳ್ಳು ಅನ್ನೋದು ತನಿಖೆ ನಂತರವಷ್ಟೇ ತಿಳಿಯಬೇಕಿದೆ.