ಧಾರವಾಡ: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸಚಿವ ಸ್ಥಾನ ಕೈ ತಪ್ಪಿರುವ ಕುರಿತು ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತಮ್ಮ ವಿರುದ್ಧದ ಆರೋಪಗಳ ಕುರಿತು ನಗುತ್ತಲೇ ಅಲ್ಲಗೆಳೆದರು. ನನ್ನ ಶುಗರ್ ಫಾಕ್ಟರಿ ಇದೆ ಅದರ ಬ್ರ್ಯಾಂಡ್ ಪ್ರಚಾರ ಮಾಡಲು ರೈತ ಮಹಿಳೆಯರಿಗೆ ಕುಕ್ಕರ್ ನೀಡಿದ್ದಾಗಿ ತಿಳಿಸಿದರು.
ಇದೇ ವೇಳೆ ತಾವು ಸಚಿವ ಸ್ಥಾನದ ಪ್ರಮುಖ ಅಕಾಂಕ್ಷಿಯಾಗಿದ್ದು, ತಾನು ಸಚಿವ ಸ್ಥಾನ ಕೇಳಿರುವ ಹಿಂದೆ ಇಂದು ಅರ್ಥ ಇದೆ. ನಾನು ಮೊದಲ ಬಾರಿ ಶಾಸಕಿಯಾಗಿ ಆಯ್ಕೆ ಆಗಿದ್ದರೂ ಕೂಡ ಈ ಬಾರಿ ಚುನಾವಣೆಯಲ್ಲಿ ಗೆದ್ದಿರುವ ನಾಲ್ವರು ಶಾಸಕಿಯರು ಮೊದಲ ಬಾರಿ ಆಯ್ಕೆ ಆಗಿದ್ದಾರೆ. ಆದರೆ ತಾವು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಸ್ಥಾನ ವಹಿಸಿದ್ದು, ನಮ್ಮ ಹಿರಿತನವನ್ನು ಪರಿಗಣಿಸಿ ಸಚಿವ ಸ್ಥಾನ ಕೇಳಿದ್ದೇವೆ. ಆದರೆ ಪಕ್ಷದ ನಾಯಕರು ನಮ್ಮನ್ನು ಪರಿಗಣಿಸಿಲ್ಲ. ಇದರಿಂದ ನಮ್ಮ ಮನಸ್ಸಿಗೆ ನೋವಾಗಿದೆ ಎಂದರು.
ಪಕ್ಷದ ಮಾನದಂಡಗಳ ಬಗ್ಗೆ ತುಂಬಾ ಬೇಸರ ಆಗಿದೆ. ಪಕ್ಷದಲ್ಲಿ ಇರುವ ನಿಯಮಗಳನ್ನು ಮೀರಿ ನಡೆಯುತ್ತಿದ್ದಾರೆ. ಈ ಮೊದಲು ಯಾವ ಎಂಎಲ್ಸಿಯನ್ನು ಮಂತ್ರಿ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಜಯಮಾಲಾರನ್ನು ರಾತ್ರೋ ರಾತ್ರಿ ಮಂತ್ರಿ ಮಾಡಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಉಗ್ರಪ್ಪ, ಅಲ್ಲಂ ವೀರಭದ್ರಪ್ಪ, ಎಸ್ಆರ್ ಪಾಟೀಲರಂಥವರಿಗೆ ಮಂತ್ರಿ ಸ್ಥಾನ ನೀಡಬೇಕಾಗಿತ್ತು. ಈ ಮಾನದಂಡಗಳು ಅವಕಾಶ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಪಕ್ಷದಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.