ಬೆಳಗಾವಿ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಕೋತಿಗೆ ವಿಧಿ ವಿಧಾನಗಳೊಂದಿಗೆ ನ್ಯಾಯವಾದಿಗಳು ಅಂತ್ಯಸಂಸ್ಕಾರ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.
ಚಿಕ್ಕೋಡಿ ಬೆಳಗಾವಿ ರಸ್ತೆ ನ್ಯಾಯಾಲಯದ ಎದುರು ಶುಕ್ರವಾರ ಸಂಜೆ ಕೋತಿಯೊಂದು ಮೃತಪಟ್ಟಿತ್ತು. ಇದನ್ನು ಗಮನಿಸಿದ ನ್ಯಾಯವಾದಿಗಳು ಹಾಗೂ ಸಾರ್ವಜನಿಕರು ಕೋತಿಯ ಮೃತದೇಹಕ್ಕೆ ಪೂಜೆ ನೆರವೇರಿಸಿ ಅಂತಿಮ ದರ್ಶನ ಪಡೆದುಕೊಂಡರು.
ಬಳಿಕ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಿ ಕೋರ್ಟ್ ಆವರಣದಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದರು. ಅಂತ್ಯಕ್ರಿಯೆ ನೆರವೇರಿದ ಸ್ಥಳದಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣ ಮಾಡಲು ನ್ಯಾಯವಾದಿಗಳು ತೀರ್ಮಾನಿಸಿದ್ದಾರೆ.