– ಕಾಲೇಜಿಗೆ ಬರಲು ವಿದ್ಯಾರ್ಥಿಗಳು ಹಿಂದೇಟು
– ಪುಂಡರ ಗಲಾಟೆಗೆ ಪೋಷಕರೇ ಸಾಥ್
ಹಾಸನ: ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಮತ್ತೆ ಗಲಾಟೆ ನಡೆದಿದ್ದು, ಪದೇ ಪದೇ ನಡೆಯುತ್ತಿರುವ ಘಟನೆಗಳಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.
ನಮ್ಮ ಕಾಲೇಜಿನಲ್ಲೇ ಓದುತ್ತಿರುವ ವಿದ್ಯಾರ್ಥಿಯೊಬ್ಬನ ಕುಮ್ಮಕ್ಕಿನಿಂದ ಹೊರಗಿನಿಂದ ಬರುವ ಪುಂಡರ ಗುಂಪು ಗಲಾಟೆ ಮಾಡುತ್ತಿದೆ. ಅಮಾಯಕ ವಿದ್ಯಾರ್ಥಿಗಳ ಮೇಲೆ ಪುಂಡರು ಹಲ್ಲೆ ಮಾಡಿದ್ದಾರೆ. ಈ ರೀತಿ ಹಲ್ಲೆ ಪ್ರಕರಣ ಪದೇ ಪದೇ ಆಗುತ್ತಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಕಾಲೇಜು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕಾಲೇಜಿಗೆ ಬರಲು ಭಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಲೇಜು ಪ್ರಾಂಶುಪಾಲೆ ಸೀಮಾ ಥಾಮಸ್, ಈ ರೀತಿ ಘಟನೆ ನಮಗೆ ಬೇಸರ ತಂದಿದೆ. ಪ್ರಕರಣದ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೇವೆ. ಮುಂದೆ ಗಲಾಟೆ ಮಾಡುವ ವಿದ್ಯಾರ್ಥಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಹಾಸನ ಎಸ್ಪಿ ಶ್ರೀನಿವಾಸ ಗೌಡ, ಎರಡು ಗುಂಪುಗಳ ನಡುವೆ ಈ ಗಲಾಟೆ ನಡೆದಿದೆ. ಸ್ಥಳಕ್ಕೆ ನಮ್ಮ ಪೊಲೀಸ್ ಸಿಬ್ಬಂದಿ ಹೋಗಿ ಹತೋಟಿಗೆ ತಂದಿದ್ದಾರೆ. ಈ ಗಲಾಟೆಯಲ್ಲಿ ಪೋಷಕರು ಕೂಡ ಇದ್ದಾರೆ. ಇಲ್ಲಿವರೆಗೂ ವಿದ್ಯಾರ್ಥಿಗಳು ದೂರು ನೀಡಿಲ್ಲ. ಆದರೆ ಪ್ರಾಂಶುಪಾಲರಿಂದ ದೂರು ಪಡೆದು ಕ್ರಮ ಕೈ ಗೊಳ್ಳಲಾಗುವುದು. ಇಲ್ಲವಾದಲ್ಲಿ ಸುಮೋಟೋ ಕೇಸ್ ದಾಖಲಿಸುತ್ತೇವೆ ಎಂದಿದ್ದಾರೆ.